Friday, June 27, 2025

ಸುಹಾಸ್ ಹತ್ಯೆ ಪ್ರಕರಣ: ಪೊಲೀಸರ ನೇರ ಕೈವಾಡ. ದುಬೈನಿಂದ ₹50 ಲಕ್ಷ ಹಣ ಸಂದಾಯ – ಉಮಾನಾಥ್ ಕೋಟ್ಯಾನ್ ಆರೋಪ

ಮಂಗಳೂರು: ‘ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ನೇರವಾಗಿ ಭಾಗಿಯಾಗಿದ್ದಾರೆ. ಆರೋಪಿಗಳೇ ಪೊಲೀಸರಿಗೆ ಶರಣಾಗಿದ್ದಾರೆ. ಬಂಧನವಾದ ಬಳಿಕ ಪೊಲೀಸರು ಆರೋಪಿಗಳ ಮೈಮುಟ್ಟಿಲ್ಲ. ಸಮಗ್ರ ತನಿಖೆಗಾಗಿ ಈ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಬೇಕು. ಸುಹಾಸ್ ಹತ್ಯೆಗೆ ದುಬೈನಿಂದ ಇದಕ್ಕೆ ₹50 ಲಕ್ಷ ಹಣ ಸಂದಾಯವಾಗಿದೆ’ ಎಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಮಾನಾಥ್ ಕೋಟ್ಯಾನ್‌ ಅವರು, ‘ಸುಹಾಸ್ ಹತ್ಯೆ ನಡೆಯುವ ವೇಳೆ ಆರೋಪಿಗಳಿಗೆ ರಕ್ಷಣೆ ಕೊಡುವ ರೀತಿಯಲ್ಲಿ 25 ಜನರು ಸುತ್ತ ಕೋಟೆ ನಿರ್ಮಿಸಿದ್ದರು. ಸ್ಥಳೀಯ ಕೆಲವರ ಸಹಕಾರದಲ್ಲಿ ಈ ಹತ್ಯೆ ನಡೆದಿದೆ. ಹತ್ಯೆಗೂ ಮುನ್ನ ಪೊಲೀಸರು ಮತ್ತು ಆರೋಪಿಗಳ ನಡುವೆ ಒಡಂಬಡಿಕೆ ನಡೆದಿರುವ ಸಾಧ್ಯತೆ ಇದೆ. ಹೀಗಾಗಿ, ಪೊಲೀಸ್ ವಾಹನ ಸ್ಥಳಕ್ಕೆ ಬಂದರೂ, ಸುಹಾಸ್ ರಕ್ಷಣೆ ಮಾಡಿಲ್ಲ. ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ’ ಎಂದರು.

‘ಆಯುಧ ಇಟ್ಟುಕೊಳ್ಳುವುದು ತಪ್ಪು, ಆದರೆ ಸುಹಾಸ್ ಆತ್ಮರಕ್ಷಣೆಗಾಗಿ ವಾಹನದಲ್ಲಿ ಇಟ್ಟುಕೊಂಡಿದ್ದ ಆಯುಧವನ್ನು ಪೊಲೀಸರು ಒತ್ತಾಯದಿಂದ ಖಾಲಿ ಮಾಡಿಸಿದ್ದರು. ಪೊಲೀಸರ ಸಹಕಾರದಲ್ಲಿ ಈ ಕೊಲೆ ನಡೆದಿದೆ. ಆರೋಪಿಗಳೇ ಪೊಲೀಸರಿಗೆ ಶರಣಾಗಿದ್ದಾರೆ. ಬಂಧನವಾದ ಬಳಿಕ ಪೊಲೀಸರು ಆರೋಪಿಗಳ ಮೈಮುಟ್ಟಿಲ್ಲ. ಸುಹಾಸ್ ಹತ್ಯೆಗೆ ಫಾಝಿಲ್ ಸಹೋದರ ₹5 ಲಕ್ಷ ನೀಡಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಆದರೆ, ದುಬೈನಿಂದ ಇದಕ್ಕೆ ₹50 ಲಕ್ಷ ಹಣ ಸಂದಾಯವಾಗಿದೆ’ ಎಂಬ ಮಾಹಿತಿ ಇದೆ ಎಂದು ಆರೋಪಿಸಿದರು.

ಬಜಪೆ, ಸುರತ್ಕಲ್‌, ಪಣಂಬೂರು ಪೊಲೀಸ್ ಠಾಣೆಯ ಕೆಲ ಪೊಲೀಸರ ಮೊಬೈಲ್ ಫೋನ್ ಕರೆಗಳನ್ನು ಪರಿಶೀಲಿಸಿದರೆ ಎಲ್ಲ ವಿಷಯ ಬಹಿರಂಗವಾಗಲಿದೆ ಎಂದು ಹೇಳಿದರು.

‘ಬಜಪೆ ಸಮೀಪದ ಫ್ಯಾಟ್‌ವೊಂದರಲ್ಲಿ ಹತ್ಯೆ ಪ್ರಕರಣದ ಆರೋಪಿಗಳು ವಾಸಿಸುತ್ತಿದ್ದಾರೆ. ಪ್ರಶಾಂತ್, ಸುಖಾನಂದ ಶೆಟ್ಟಿ ಹತ್ಯೆ ಆರೋಪಿಗಳು ಇದೇ ಫ್ಯಾಟ್‌ನಲ್ಲಿ ಇದ್ದರು. ಸುಹಾಸ್ ಕೊಲೆ ಆರೋಪಿಗಳು ಕೂಡ ಇದೇ ಫ್ಯಾಟ್‌ನಿಂದ ತೆರಳಿದ್ದಾರೆ ಎಂಬ ಮಾಹಿತಿ ಇದೆ. ಹಿಂದೂಗಳ ಮನೆಗೆ ಹೋಗಿ ಪರಿಶೀಲಿಸುವ ಪೊಲೀಸರು, ಯಾಕೆ ಈ ಫ್ಲ್ಯಾಟ್ ಪರಿಶೀಲನೆ ಮಾಡುತ್ತಿಲ್ಲ’ ಎಂದರು.

ಸುದ್ದಿಗೋಷ್ಟಿಯಲ್ಲಿ ಜಯಂತ್ ಕೋಟ್ಯಾನ್, ಸಂದೀಪ್, ಈಶ್ವರ್ ಕಟೀಲ್, ದಿನೇಶ್ ಪುತ್ರನ್, ರಂಜಿತ್, ರಾಜೇಶ್, ವಿಜಯ್ ಪಾಲ್ಗೊಂಡಿದ್ದರು.

Related Articles

Latest Articles