ಪುತ್ತೂರು: ಕೃಷಿ ಎಂಬುವುದು ನಿಂತ ನೀರಲ್ಲ. ಆಧುನಿಕ ಯುಗದಲ್ಲಿ ಕೃಷಿಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಅಣಬೆ ಕೃಷಿ ಮಾಡಿ ಕೈತುಂಬಾ ಕಾಸು ಗಳಿಸುವ ಕೃಷಿಕರೂ ನಮ್ಮ ನಡುವೆಯೇ ಇದ್ದಾರೆ. ಇಲ್ಲೊಬ್ಬರು ಅಪರೂಪದಲ್ಲಿ ಅಪರೂಪ ಎಂಬ ಅಣಬೆಯನ್ನು ನಿರಂತರ ಪ್ರಯೋಗದ ಮೂಲಕ ಮರು ಸೃಷ್ಟಿಗೊಳಿಸಿದ್ದಾರೆ. ಕೃಷಿಕನ ಈ ಕಾರ್ಯಕ್ಕೆ ಈಗ ಅಂತರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಅಂತಾರಾಷ್ಟ್ರೀಯ ಫುಡ್ ಜರ್ನಲ್.ನಲ್ಲಿ ಭಾರತದ ಅಡಿಕೆ ಅಣಬೆ ದಾಖಲೆ ಬರೆದಿದೆ.
ಶತಮಾನಗಳ ಹಿಂದೆ ತಿನ್ನಲು ಬಳಸುತ್ತಿದ್ದ ಮತ್ತು ಬಳಿಕದ ದಿನಗಳಲ್ಲಿ ಕೇವಲ ಗ್ರಂಥದಲ್ಲಿ ಮಾತ್ರ ಉಳಿದುಕೊಂಡಿದ್ದ ವಿಶ್ವದ ಅಪೂರ್ವ ಅಣಬೆ ಪ್ರಬೇಧವೊಂದನ್ನು ಪುತ್ತೂರಿನ ಕೃಷಿಕರೊಬ್ಬರು ನಿರಂತರ ಪ್ರಯೋಗದ ಮೂಲಕ ಮರುಸೃಷ್ಟಿ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮುಡಿಪುನಡ್ಕ ನಿವಾಸಿ ಹರೀಶ್ ರೈ ದೇರ್ಲ ಎಂಬವರು ಸಾಂಪ್ರದಾಯಿಕವಾಗಿ ಅಡಿಕೆ ಸಿಪ್ಪೆಯಲ್ಲಿ ಅಣಬೆ ಕೃಷಿ ಮಾಡಿ ಗಮನ ಸೆಳೆದಿದ್ದಾರೆ. ಈ ಮೂಲಕ ಪ್ರಾಚೀನ ಅಣಬೆ ಪ್ರಬೇಧವೊಂದಕ್ಕೆ ಮರುಜೀವ ನೀಡಿದ್ದಾರೆ. ವಿಶೇಷವೆಂದರೆ, ಈ ಮಾದರಿಯ ಅಣಬೆ ಕೃಷಿಗೆ ಬೀಜ ನಾಟಿ ಮಾಡಬೇಕಿಲ್ಲ.
ಮಳೆಗಾಲದಲ್ಲಿ ಕೊಳೆತ ಸಾವಯವ ರಾಶಿಯಲ್ಲಿ ಹುಟ್ಟಿ ಮಾಯವಾಗುತ್ತಿದ್ದ ಅಣಬೆ ಪ್ರಬೇಧವನ್ನು ವರ್ಷದ 12 ತಿಂಗಳು ಕೂಡ ಬಿತ್ತನೆ ಬೀಜವಿಲ್ಲದೆ ಫಸಲು ಪಡೆದು ಇವರು ಕ್ರಾಂತಿ ಮಾಡಿದ್ದಾರೆ. ಹರೀಶ್ ರೈ ದೇರ್ಲ ಪ್ರಯೋಗಶೀಲ ಕೃಷಿಕ. ನಿರಂತರ 24 ಬ್ಯಾಚ್ಗಳಲ್ಲಿ ಅಣಬೆ ಕೃಷಿ ಮಾಡಿ ಈಗ 25 ನೇ ಬ್ಯಾಚ್ ತಯಾರಿಸುತ್ತಿದ್ದಾರೆ.
ಸುಲಿದ ಅಡಕೆ ಸಿಪ್ಪೆಯನ್ನೇ ಹದವಾಗಿ ಹರಡಿ ನೀರು ಸಿಂಪಡಿಸಿ ಕೊಳೆಯಲು ಬಿಡುತ್ತಾರೆ. 10ನೇ ದಿನಕ್ಕೆ ಹುಟ್ಟಿಕೊಳ್ಳುವ ಪ್ರಕೃತಿಜನ್ಯ ಅಣಬೆಯನ್ನು ಪ್ರತೀ ದಿನ ಸಂಜೆ ಕೊಯ್ಯುತ್ತಾರೆ. 10 ದಿನ ಕೊಯ್ಲುಮಾಡಿ ಬ್ಯಾಚ್ ಮುಗಿಸುತ್ತಾರೆ. ಮತ್ತೆ ಮುಂದಿನ ಬ್ಯಾಚ್ಗೆ ಹೊಸ ಅಡಕೆ ಸಿಪ್ಪೆ ಹರಡುತ್ತಾರೆ. ಹರೀಶ್ ರೈ ದೇರ್ಲ ತಯಾರಿಸಿರುವ ಅಣಬೆಯ ಬಗ್ಗೆ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (CPCRI) ವಿಜ್ಞಾನಿಗಳೂ ನಿರಂತರ ಒಂದು ವರ್ಷದಿಂದ ಅಧ್ಯಯನ ನಡೆಸಿದ್ದಾರೆ. ನಂತರ ಇದು ತಿನ್ನಲು ಯೋಗ್ಯ ಎಂಬುದಾಗಿ ಘೋಷಣೆ ಮಾಡಿದ್ದಾರೆ. ಪರಿಣಾಮವಾಗಿ ಅಡಿಕೆ ಸಿಪ್ಪೆಯಲ್ಲಿ ಬೆಳೆದ ವಿಶ್ವದ ಅಪೂರ್ವ ‘ಕಾಪ್ರಿನೋಪ್ಸಿಸ್ ಸಿನೆರಿಯಾ’ ಪ್ರಬೇಧ ಅಣಬೆಯ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಫುಡ್ ಜರ್ನಲ್ ‘ಎಮಿರೇಟ್ಸ್ ಜರ್ನಲ್ ಆಫ್ ಫುಡ್ ಆ್ಯಂಡ್ ಎಗ್ರಿಕಲ್ಚರ್’ ಕೂಡ ಲೇಖನ ಪ್ರಕಟಿಸಿದೆ.
EJFA Published article: Read to click this Link
ಹರೀಶ್ ರೈ ಅವರ ಅಣಬೆ ಪ್ರಭೇದದ ಬಗ್ಗೆ ಕೃಷಿ- ಜಲ ತಜ್ಞ ಶ್ರೀಪಡ್ರೆ ಅವರು ಸಿಪಿಸಿಆರ್ಐ ವಿಜ್ಞಾನಿಗಳ ಗಮನ ಸೆಳೆದಿದ್ದರು. ವಿಜ್ಞಾನಿಗಳು ಮುಡಿಪಿನಡ್ಕ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿ ಕ್ಯಾಲಿಕಟ್ ವಿವಿ ಸಹಯೋಗದ ಜತೆ ಸಂಶೋಧನೆಗೆ ಒಳಪಡಿಸಿ ಭಾರತದ 283 ಮತ್ತು ವಿಶ್ವದ 2000 ಖಾದ್ಯ ಅಣಬೆ ಪ್ರಭೇಧಗಳ ಪೈಕಿ ಇದೂ ಒಂದೆಂದು ಖಚಿತಪಡಿಸಿದ್ದಾರೆ.
ಮಳೆಗಾಲದಲ್ಲಿ ಕೊಳೆಯುವ ಅಡಕೆ ಸಿಪ್ಪೆಯ ರಾಶಿಯಲ್ಲಿ ಅಣಬೆ ಹುಟ್ಟುವುದು ಮೊದಲೇನಲ್ಲ. ಆದರೆ ಇದನ್ನು ಯಾರೂ ಬಳಸುತ್ತಿರಲಿಲ್ಲ. ಒಂದೇ ದಿನದಲ್ಲಿಈ ಅಣಬೆ ಹುಟ್ಟಿ ಬೆಳೆದು ಕಣ್ಮೆರೆಯಾಗುತ್ತಿತ್ತು. ಪರಿಚಯದ ರಾಮಕೃಷ್ಣ ಪ್ರಭು ಎಂಬವರ ತೋಟದಲ್ಲಿ ನಾನಿದನ್ನು ಕಂಡು ವಿಚಾರಿಸಿದಾಗ ಹಿರಿಯರ ಕಾಲದಲ್ಲಿಈ ಪ್ರಭೇದವನ್ನು ತಿನ್ನುತ್ತಿದ್ದರಂತೆ ಎಂಬ ಮಾಹಿತಿ ತಿಳಿಯಿತು. ಬಳಿಕ ನಾನು ಅಡಕೆ ಸಿಪ್ಪೆಯನ್ನು ಹರಡಿ ಕೊಳೆಯುವಂತೆ ಮಾಡಿ ಗಮನಿಸಿದೆ. ಅದೇ ಜಾತಿಯ ಅಣಬೆ ಹುಟ್ಟಿಕೊಂಡಿತು. ಹೀಗೆ ಆರಂಭವಾದ ಪ್ರಯೋಗವನ್ನು ಬೇಸಿಯಲ್ಲೂ ಮುಂದುವರಿಸಿ ಯಶಸ್ವಿಯಾದೆ. ಬಳಕೆಯೇ ನಿಂತು ಹೋಗಿದ್ದ ಈ ಪ್ರಭೇದ ಈಗ ಮತ್ತೊಮ್ಮೆ ತಿನ್ನಲು ಸಿಗುತ್ತಿದೆ. ಈ ಅಣಬೆಯಲ್ಲಿ ರೋಗ ನಿರೋಧಕ ಶಕ್ತಿಯಿದೆ ಎಂಬ ಬಗ್ಗೆ ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ.
ಈ ಅಣಬೆ ಯಾವ ಜಾತಿಗೆ ಸೇರಿದ್ದೆಂದು ಯಾರಿಗೂ ಗೊತ್ತಿರಲಿಲ್ಲ. ಶತಮಾನದ ಹಿಂದೆ ಕೆಲವು ಕಡೆ ತಿನ್ನುತ್ತಿದ್ದರೂ ನಂತರ ಬಳಕೆಯೇ ನಿಂತು ಹೋಗಿತ್ತು. ಸಂಜೆ ಹೊತ್ತು ಮೂಡಿ ರಾತ್ರಿಯೇ ಬಾಡುತ್ತಿದ್ದರಿಂದ ಜನ ಅನಾದರ ವಹಿಸಿದ್ದರು. ಬೆಳಗ್ಗೆ ಕಪ್ಪಾಗುತ್ತಿದ್ದ ಕಾರಣ ವಿಷ ಅಣಬೆಯೆಂದೇ ಬಹುತೇಕರು ಭಾವಿಸಿದ್ದರು. ಹರೀಶ್ ರೈ ಇದನ್ನು ಬೆಳೆಯಲಾರಂಭಿಸಿದ ಬಳಿಕ ವಿಟ್ಲ ಸಿಪಿಸಿಆರ್ಐ ವಿಜ್ಞಾನಿಗಳು ಮಾದರಿ ಸಂಗ್ರಹಿಸಿದರು.
ಕೇರಳದ ಕ್ಯಾಲಿಕೆಟ್ ವಿ.ವಿ.ಯ ತಜ್ಞ ದೀಪನ್ ಲತಾ ನೇತೃತ್ವದ ತಂಡ ಮಾರ್ಫಾಲಜಿ ಮಾಡಿ ಇದು ‘ಕಾಪ್ರಿನೋಪ್ಸಿಸ್ ಸಿನೆರಿಯಾ’ ಪ್ರಭೇದದ ಅಣಬೆ ಎಂದು ದೃಢಪಡಿಸಿದರು. ಈ ಪ್ರಭೇದ ತಿನ್ನಲರ್ಹವಾದುದು. ಆದರೆ ಅಮಲು ಪದಾರ್ಥದ ಜತೆ ಸೇವನೆ ಮಾಡಬಾರದು ಎಂಬ ಮಾಹಿತಿ ಈ ಪ್ರಭೇದದ ಮೂಲ ಸ್ವರೂಪ ವಿವರಣೆಯಲ್ಲಿದೆ ಎನ್ನುತ್ತಾರೆ ಸಿಪಿಸಿಆರ್ಐ ವಿಜ್ಞಾನಿಗಳು. ಈ ಅಣಬೆಯ ಮೊಲೆಕ್ಯುಲರ್ ಅನಾಲಿಸಿಸ್ನ್ನು ವಿಟ್ಲ ಸಿಪಿಸಿಆರ್ಐ ಮುಖ್ಯಸ್ಥ ಡಾ.ಎಂ.ಕೆ.ರಾಜೇಶ್ ನೇತೃತ್ವದ ತಂಡ ಮಾಡಿದೆ.