Saturday, May 24, 2025

ಭೂಮಿ ಮನೆ | ಪರುಷರಸ | ಮುನ್ನುಡಿ.. ಮುಂಗಾರು | ಮೂರು ಕವನಗಳು; ಗುಣಾಜೆ ರಾಮಚಂದ್ರ ಭಟ್

ಭೂಮಿ ಮನೆ

ಮನುಜನು ಪರಿಸರ ತಾಯಿಯ ಕಂದನು
ಮನಸಾ ಪೂಜಿಸಿ ತಾಯನ್ನು..
ಧನನಿಧಿ ತರುವೇ ವರಗಳು ಭೂಮಿಗೆ
ವನಸಿರಿ ರಕ್ಷಿಸು ನಮ್ಮನ್ನು ..

ಮಣ್ಣಿನ ಸಾರವನುಳಿಸಲು ಕವಚವು
ಕಣ್ಣನು ತುಂಬುವ ಮರವೆಲ್ಲ ..
ಬಣ್ಣಿಸಲಸದಳ ಹಸಿರಿನ ಚೆಲುವನು
ಮಣ್ಣಿಗೆ ಶೋಭೆಯು ಪೈರೆಲ್ಲ..

ಹರಿಯುವ ಝರಿಸಿರಿ ಜೀವನ ದಾಯಕ
ಕರೆಯುತ ನಾದದಿ ಸಾಗುತಿವೆ ..
ಧರೆಯಲಿ ಸಗ್ಗದ ತಾಣವ ಕಾಣಿಸೆ
ಮೊರೆಯುವ ಸಾಗರ ದಡಗಳಿವೆ

ಮಳೆಯಲಿ ತೋಯುತ ಪರ್ಣವು ಸೊಗಸಿದೆ
ಚೆಲುವಿನ ಜಾಲವು ಪಚ್ಚೆ ಸಿರಿ
ಇಳೆಯೇ ನಮಗಿಹ ಒಂದೇ ಧಾಮವು
ಕಳೆಯನು ಬೀರಿದೆ ಹಿಮದ ಗಿರಿ

ದೇವರ ಗೇಹವು ಭೂಮಿಯ ಮಡಿಲೊಳು
ಕಾವನ ನಂಬುತ ನೀ ಬಾಳು..
ಭಾವವ ತುಂಬುವ ಹೊಲಗಳ ಹಸಿರಲಿ
ನೋವನು ಮರೆಸುವ ದನಿ ಕೇಳು.

======================

ಪರುಷರಸ
(ಏಳೆ ಕವನ)

ಹಸಿರನು ಉಡಿಸುತ ಬಸಿರನು ತುಂಬಲು
ಕೆಸರಿನ ಹೊಲವ ಉಳಬೇಕು..

ನೆಲ್ಲನು ಬಿತ್ತಲು ಚೆಲ್ಲುತ ಹೊಲದಲಿ
ಬಲ್ಲವನಿದನು ಬೆಳೆಗಾರ ..

ಕವಿಯುತ ಮೋಡವು ಸವಿಯಾದ ಸೋನೆಯು
ಕವನವ ಬರೆದ ಕವಿ ಮಿತ್ರ..

ನೆನೆದಿಹ ಮಣ್ಣಲಿ ನನೆಗಳ ಸಸಿಗಳು
ಮನವನು ಸೆಳೆದು ಸಂತೋಷ..

ಹುಲ್ಲಲಿ ಚೇತನ ಚೆಲ್ಲುತ ತುಂಬಿದೆ
ಮೆಲ್ಲಗೆ ಹರಡಿ ಹಸಿರುಕ್ಕು ..

ವಲ್ಲರಿ ಚಿಗುರುತ ಪಲ್ಲವ ಸೆಳೆದಿದೆ
ಮೆಲ್ಲಗೆ ಗಾಳಿ ಸವರುತ್ತ..

ತೋಟದ ತಾಣದಿ ಮಾಟದ ಮರಗಳು
ನೋಟವ ತೋರಿ ಬೆಳೆ ಹಬ್ಬ..

ಮಾಂತ್ರಿಕನಂತೆಯೆ ಕ್ರಾಂತಿಯ ಮಾಡಿದ
ತಾಂತ್ರಿಕನೀತ ಮಳೆರಾಯ..

ಬರಿಸದ ಹಿತಕರ ಪರುಷಕೆ ಭೂಮಿಯು
ಹರುಷವ ಹೊಂದಿ ಬಸುರಾಯ್ತು ..

============================

ಮುನ್ನುಡಿ.. ಮುಂಗಾರು
(ಏಳೆ ಕವನ)

ನೀರಿನ ಸೆಲೆಗಳು ಧಾರೆಯ ರೂಪದಿ
ತೋರುತ ಬಂತು ಮುಂಗಾರು..

ಗಾಳಿಯ ತಾಂಡವ ಧಾಳಿಯ ಮಾಡಲು
ಬಾಳೆಯ ಕಾಂಡ ಉದ್ದಂಡ..

ಕಡಲಿನ ಘರ್ಜನೆ ಗಡ ಗಡ ನಡುಗಿಸಿ
ಪೊಡವಿಗೆ ತಂತು ಮಳೆಗಾಲ..

ಮೊಳೆಯುತ ಬೀಜವು ಬೆಳೆಗಳ ಸಾಕಾರ
ಕಳೆಯಿದೆ ಕಣ್ಣ ತುಂಬೆಲ್ಲ ..

ಧೂಳನು ತೊಲಗಿಸಿ ಬಾಳನು ಬೆಳಗಿಸೆ
ತಾಳಿದ ವರುಣನವತಾರ..

ಪಕ್ಕದ ವಾದ್ಯವ ಚೊಕ್ಕದಿ ಮೊಳಗಿಸಿ
ಪಕ್ಕನೆ ಬಂದ ಮಳೆರಾಯ..

ಗುಡುಗಿನ ಸದ್ದದು ಸಿಡಿಯುತ ಕೇಳಿದೆ
ಬಡ ಬಡಿಸುತ್ತ ಬಾನಿಂದ ..

ದುಡಿಯುವ ರೈತನ ದುಡಿಮೆಗೆ ಬಲ ಬಂತು
ಗುಡಿಸಲ ನಿಶೆಯು ಬೆಳಕಾಗಿ..

ಮುನ್ನುಡಿ ಮುಂಗಾರು ಹೊನ್ನಂಥ ಕಾಲಕ್ಕೆ
ಬೆನ್ನುಡಿ ಕೊನೆಗೆ ಹಿಂಗಾರು..

Related Articles

Latest Articles