ಉಡುಪಿ: ನೇಜಾರಿನಲ್ಲಿ ನಾಲ್ವರನ್ನು ಭೀಕರವಾಗಿ ಹತ್ಯೆಗೈದ ಪ್ರವೀಣ್ ಅರುಣ್ ಚೌಗಲೆಯನ್ನು ಪೊಲೀಸರು ಗುರುವಾರ ಸ್ಥಳ ಮಹಜರಿಗಾಗಿ ಕೃತ್ಯ ಎಸಗಿದ ಮನೆಗೆ ಕರೆತಂದಿದ್ದಾರೆ. ವೇಳೆ 30 ರಿಂದ 40 ಆಕ್ರೋಶಿತರು ಗುಂಪು ಕಟ್ಟಿಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಾಪಸ್ ಹೋಗುವ ವೇಳೆ ಸೇರಿದ್ದ ಸಾರ್ವಜನಿಕರ ಪೈಕಿ ಕೆಲವರು ಆರೋಪಿಗೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದರು.

ಆರೋಪಿಯನ್ನು ವಾಹನದಿಂದ ಕೆಳಗೆ ಇಳಿಸುತಿದ್ದಂತೆಯೆ ಮಾಧ್ಯಮದವರ ಮುಂದೆ ಅಲ್ಲಿ ಸೇರಿದ್ದ 100 ರಿಂದ 200 ಜನ ಸಾರ್ವಜನಿಕರು ಗಲ್ಲಿಗೇರಿಸಿ ಗಲ್ಲಿಗೇರಿಸಿ ಪ್ರವೀಣ್ ನನ್ನು ಗಲ್ಲಿಗೇರಿಸಿ ಎಂದು ಘೋಷಣೆಯನ್ನು ಕೂಗಿದ್ದರು.
ತನಿಖೆ ಪ್ರಕ್ರಿಯೆ ಮುಗಿಸಿ ಆರೋಪಿತನನ್ನು ಇಲಾಖಾ ವಾಹನದಲ್ಲಿ ಕುಳ್ಳಿರಿಸಿ ಹೊರಡುವ ಹೊತ್ತಿಗೆ ಸುಮಾರು 30 ರಿಂದ 40 ಜನ ಸಾರ್ವಜನಿಕರು ಆರೋಪಿತನನ್ನು ನಮಗೆ ಕೊಡಿ ಇಲ್ಲಿಯೇ ಶಿಕ್ಷೆ ನೀಡುತ್ತೇವೆ ಎಂದು ಇಲಾಖಾ ವಾಹನವನ್ನು ಅಡ್ಡ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಗಿ ವರದಿಯಾಗಿದೆ.
ಈ ವೇಳೆ ಕೆಎಸ್ಆರ್ ಪಿ ಕಾನ್ಸ್ಟೇಬಲ್ ಒಬ್ಬರು ಆಯ ತಪ್ಪಿ ಚರಂಡಿಗೆ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗಿದೆ.
”ನಾವು ಗಲಭೆ ನಡೆಸಿದ್ದಕ್ಕಾಗಿ ಎಫ್ಐಆರ್ ದಾಖಲಿಸಿದ್ದೇವೆ. ಪ್ರೇರೇಪಿಸಿದವರ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗುವುದು. ವೀಕ್ಷಿಸುತ್ತಿದ್ದ ಸ್ಥಳೀಯ ಸಾರ್ವಜನಿಕರ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.