Friday, June 27, 2025

ಕಲ್ಲಂಗಡಿ ಚಿತ್ರವಿರುವ ಛತ್ರಿ ಹಿಡಿದು ಪ್ರತಿಭಟನೆ; ಭಾರತದ ಮಹಿಳೆ ವಿರುದ್ಧ ಕೇಸ್; ಕಾರಣ ಹೀಗಿದೆ

ಸಿಂಗಾಪುರ: ಉಗ್ರ ಪ್ರತಿಭಟನೆ ಆದಾಗ ಪೊಲೀಸರು ಕೇಸು ದಾಖಲಿಸುವ ಬಗ್ಗೆ ಕೇಳಿದ್ದೇವೆ. ಸಾರ್ವಜನಿಕರಿಗೆ ತೊಂದರೆ, ಸಾರ್ವಜನಿಕ ಆಸ್ತಿ ಹಾನಿ, ಅಧಿಕಾರಿಗಳಿಗೆ ತೊಂದರೆ ಕೊಟ್ಟರೆ ಕೇಸ್ ದಾಖಲಾಗುತ್ತದೆ. ಆದರೆ ಇಲ್ಲೊಂದು ಕಡೆ ವಿಚಿತ್ರವಾಗಿ ಪ್ರತಿಭಟನೆ ಮಾಡಿದ್ದಕ್ಕಾಗಿ ಕೇಸ್ ದಾಖಲಾಗಿದೆ.

ಸಿಂಗಾಪುರದ ಅಧ್ಯಕ್ಷರ ಭವನವಾದ ಇಸ್ತಾನಕ್ಕೆ ಪ್ಯಾಲೆಸ್ತೀನ್ ಪರ ಮೆರವಣಿಗೆ ನಡೆಸಿದ ಆರೋಪದ ಮೇಲೆ ಭಾರತೀಯ ಮೂಲದ ಒಬ್ಬ ಮಹಿಳೆ ಸೇರಿದಂತೆ ಮೂವರು ಸಿಂಗಾಪುರದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ.

ಇದೊಂದು ಹಳೆಯ ಘಟನೆಯಾಗಿದೆ. ಆದರೆ ಸ್ವಾರಸ್ಯವೂ ಇದೆ. ಈ ಘಟನೆ ಫೆಬ್ರವರಿ 2ರಂದು ನಡೆದಿದೆ. ಲೈಸೆನ್ಸ್ ಇಲ್ಲದೆ ಮೆರವಣಿಗೆಯನ್ನು ಆಯೋಜಿಸಿದ್ದಕ್ಕಾಗಿ ಸಾರ್ವಜನಿಕ ಸುವ್ಯವಸ್ಥೆ ಕಾಯಿದೆಯಡಿ ಜೂನ್‌ನಲ್ಲಿ ಮೂವರ ವಿರುದ್ಧ ಆರೋಪ ಹೊರಿಸಲಾಗಿತ್ತು.

ಭಾರತ ಮೂಲದ ಅಣ್ಣಾಮಲೈ ಕೋಕಿಲಾ ಪಾರ್ವತಿ ಎಂಬ ಮಹಿಳೆ ಮೆರವಣಿಗೆಯನ್ನು ಆಯೋಜಿಸಲು ಇತರ ಇಬ್ಬರು ಮಹಿಳೆಯರು ಮತ್ತು ಇತರ ಅಪರಿಚಿತ ವ್ಯಕ್ತಿಗಳೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಸಂಚಿಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

36 ವರ್ಷದ ಕೋಕಿಲಾ ಪಾರ್ವತಿ ಅವರ ವಿರುದ್ಧ ನಿಷೇಧಿತ ಪ್ರದೇಶದಲ್ಲಿ ಸಾರ್ವಜನಿಕ ಮೆರವಣಿಗೆಯನ್ನು ಆಯೋಜಿಸಲು ಕುಮ್ಮಕ್ಕು ನೀಡಿದ ಆರೋಪ ಹೊರಿಸಲಾಗಿದ್ದು, ಮಧ್ಯಾಹ್ನ 2ರಿಂದ 3 ಗಂಟೆಯ ನಡುವೆ ನಡೆದ ಮೆರವಣಿಗೆಯನ್ನು ಆಯೋಜಿಸಿದ ಆರೋಪದಲ್ಲಿ ಸಿತಿ ಅಮೀರಾ ಮೊಹಮ್ಮದ್ ಅಸ್ರೋರಿ (29) ಮತ್ತು ಮೊಸಮ್ಮದ್ ಸೊಬಿಕುನ್ ನಹರ್ (25) ಅವರ ವಿರುದ್ಧ ಕೂಡ ಕೇಸ್ ದಾಖಲಿಸಲಾಗಿದೆ.

ಪ್ರತಿಭಟನಾಕಾರರು ಕಲ್ಲಂಗಡಿ ಬಣ್ಣದ ಕೊಡೆ ಹಾಗೂ ವಿವಿಧ ಬಣ್ಣದ ಕೊಡೆಗಳನ್ನು ಹಿಡಿದುಕೊಂಡಿದ್ದರು. ಹಲವಾರು ಮಂದಿ ವಿವಿಧ ಸ್ಲೋಗನ್ ಹಿಡಿದುಕೊಂಡು ಭಾಗಿಯಾಗಿದ್ದರು. ಫೆಬ್ರವರಿ 2ರಂದು ಮಧ್ಯಾಹ್ನ 2 ಗಂಟೆಗೆ ಮಾಲ್‌ನ ಹೊರಗೆ ಆರ್ಚರ್ಡ್ ರಸ್ತೆಯಲ್ಲಿ ಸುಮಾರು 70 ಜನರು ಜಮಾಯಿಸಿ ಇಸ್ತಾನಾ ಕಡೆಗೆ ಮೆರವಣಿಗೆ ಸಾಗಿದರು ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Latest Articles