ಕೇಂದ್ರ ತನಿಖಾ ದಳ(ಸಿಬಿಐ) ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಅಲ್ಲದೇ, ಸರ್ಕಾರವು ಸಿಬಿಐ ದಾಖಲಿಸುವ ಪ್ರಕರಣಗಳು ಅಥವಾ ಅದರ ತನಿಖೆಯ ಮೇಲ್ವಿಚಾರಣೆ ಮಾಡುವುದಿಲ್ಲ ಎಂದು ಗುರುವಾರ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಹೇಳಿದೆ.
ರಾಜ್ಯದ ಅಗತ್ಯ ಒಪ್ಪಿಗೆ ಇಲ್ಲದೇ ಸಿಬಿಐ ತನಿಖೆ ನಡೆಸುತ್ತಿರುವುದನ್ನು ಆಕ್ಷೇಪಿಸಿ ಸಂವಿಧಾನ 131ನೇ ವಿಧಿಯಡಿ ಪಶ್ಚಿಮ ಬಂಗಾಳ ಕೇಂದ್ರ ಸರ್ಕಾರದ ವಿರುದ್ಧ ಸುಪ್ರಿಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.

ವಿಚಾರಣೆಗೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ.ಬಂಗಾಳದ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ವಾದಿಸಿದರು. ಸಿಬಿಐ ಪ್ರಕರಣ ದಾಖಲಿಸಿದೆಯೇ ಹೊರತು ಕೇಂದ್ರ ಸರ್ಕಾರವಲ್ಲ. ಸಿಬಿಐ ಮೇಲೆ ಕೇಂದ್ರ ಸರ್ಕಾರದ ಯಾವುದೇ ನಿಯಂತ್ರಣವೂ ಇಲ್ಲ. ತನಿಖೆಯ ಮೇಲ್ವಿಚಾರಣೆಯನ್ನು ಕೇಂದ್ರ ಮಾಡಲು ಆಗುವುದಿಲ್ಲ ಎಂದು ವಾದಿಸಿದರು. ಪಶ್ಚಿಮ ಬಂಗಾಳ ಪರವಾಗಿ ಕಪಿಲ್ ಸಿಬಲ್ ಹಾಜರಾಗಿದ್ದರು. ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮೇ 8ಕ್ಕೆ ಮುಂದೂಡಿತು.