Friday, June 27, 2025

ಜಮೀನು ವಿವಾದ: ಸಹೋದರನ ಮೇಲೆ ಟ್ರ್ಯಾಕ್ಟರ್‌ ಹರಿಸಿ ಭೀಕರ ಹತ್ಯೆ

ರಾಜಸ್ಥಾನ: ಭರತ್‌ಪುರ ಜಿಲ್ಲೆಯಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸ್ವಂತ ಸಹೋದರನ ಮೇಲೆಯೇ ಹಲವು ಬಾರಿ ಟ್ರ್ಯಾಕ್ಟರ್‌ ಹರಿಸಿದ ಬರ್ಬರ ಘಟನೆ ನಡೆದಿದೆ. ಕೃತ್ಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸ್ಥಳೀಯರು ಕೃತ್ಯವನ್ನು ಚಿತ್ರೀಕರಿಸಿದ್ದಾರೆ.

ಟ್ರ್ಯಾಕ್ಟರ್‌ಗೆ ಸಿಲುಕಿ ಮೃತಪಟ್ಟ ವ್ಯಕ್ತಿಯನ್ನು 30 ವರ್ಷದ ನಿರ್ಪತ್ ಗುರ್ಜರ್ ಎಂದು ಗುರುತಿಸಲಾಗಿದ್ದು, ಆತನ ಸಹೋದರ ದಾಮೋದರ್ ಗುರ್ಜಾರ್ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಎಂದು ಹೇಳಲಾಗಿದೆ.

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ಮೂರು ದಿನಗಳ ಹಿಂದೆಯೂ ಜಗಳವಾಗಿತ್ತು, ಇಂದು ಅವರ ನಡುವೆ ಮತ್ತೆ ಜಗಳವಾಗಿದೆ. ಸಹೋದರ ಟ್ರ್ಯಾಕ್ಟರ್ ಹರಿಸಿ ನಿರ್ಪತ್‌ನನ್ನು ಕೊಂದಿದ್ದಾನೆ ಎಂದು ಭರತ್‌ಪುರದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಓಂಪ್ರಕಾಶ್ ಕಿಲಾನಿಯಾ ತಿಳಿಸಿದ್ದಾರೆ.

ನಿರ್ಪತ್ ಮತ್ತು ದಾಮೋದರ್ ನಡುವೆ ದೀರ್ಘ ಕಾಲದಿಂದ ಜಮೀನು ವಿವಾದವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಈವರೆಗೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದವರನ್ನು ಹಿಡಿಯಲು ಬಲೆ ಬೀಸಿದ್ದಾರೆ.

Related Articles

Latest Articles