ದಕ್ಷಿಣ ಕನ್ನಡ: ಮನೆಯೊಳಗೆ ಬಂದ 12 ಅಡಿ ಉದ್ದದ ಬೃಹತ್ ಗಾತ್ರ ಕಾಳಿಂಗ ಸರ್ಪವೊಂದನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ. ಜಿಲ್ಲೆಯ ಇಂದಬೆಟ್ಟುವಿನ ಬಂಗಾಡಿ ಎಂಬಲ್ಲಿನ ಮನೆಯ ಮಂಚದ ಅಡಿಯಲ್ಲಿ ಕಾಳಿಂಗ ಸರ್ಪ ಅಡಗಿದ್ದು ಕೆಲಕಾಲ ಆತಂಕ ಸೃಷ್ಟಿಸಿತ್ತು.
ಮನೆಮಂದಿ ಮನೆಯ ಒಂದು ಪಾರ್ಶ್ವವನ್ನು ಮಾತ್ರ ಬಳಸುತ್ತಿದ್ದರು. ಮತ್ತೊಂದು ಪಾರ್ಶ್ವದ ಕೋಣೆಯ ಮಂಚದ ಅಡಿಯಲ್ಲಿ ಕಾಳಿಂಗ ಸರ್ಪ ಇತ್ತು. ಕೋಣೆಯ ಬಾಗಿಲು ತೆಗೆದಾಗ ಮಂಚದಡಿಯಲ್ಲಿ ಶಬ್ದ ಕೇಳಿಬಂದಿದೆ. ಏನೆಂದು ಮಂಚದಡಿ ನೋಡಿದಾಗ ಬೃಹತ್ ಕಾಳಿಂಗ ಸರ್ಪ ಪತ್ತೆಯಾಗಿದೆ.
ನಂತರ ಮನೆಯವರು ಉರಗ ರಕ್ಷಕ ಅಶೋಕ್ ಲಾಯಿಲ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಉರಗ ರಕ್ಷಕ ಅಶೋಕ್ ಲಾಯಿಲ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.