ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಬೆಂಗಳೂರು ಮೂಲದ ವಿಶಾಲ್(19) ಹಾಗೂ ತಮಿಳುನಾಡು ಮೂಲದ ರೋಹನ್ (18) ಮೃತ ಯುವಕರು.
ಮೈಸೂರಿನ ಅಜ್ಜಿ ಮನೆಗೆ ಪೋಷಕರೊಂದಿಗೆ ಬಂದಿದ್ದ ಯುವಕರು, ಇಂದು(ಜೂ.13) ಶ್ರೀರಂಗಪಟ್ಟಣದ ನಿಮಿಷಾಂಭ ದೇವಿ ದರ್ಶನಕ್ಕಾಗಿ ಕುಟುಂಬ ಸಮೇತ ಬಂದಿದ್ದರು. ಈ ವೇಳೆ ಇತ್ತ ಈಜಲು ಕಾವೇರಿ ನದಿಗಿಳಿದಿದ್ದ ಇಬ್ಬರು ಯುವಕರು ಈಜು ಬಾರದೇ ಸಾವನ್ನಪ್ಪಿದ್ದಾರೆ.
ಮಗನನ್ನ ಕಳೆದುಕೊಂಡ ತಾಯಿ ರೋಧನೆ ಮುಗಿಲು ಮುಟ್ಟಿದ್ದು, ಕಾವೇರಿ ನದಿಗಿಳಿದು ಮಕ್ಕಳಿಗಾಗಿ ತಾಯಿ ಕೂಡ ಹುಡುಕಾಟ ನಡೆಸಿದ್ದರು. ‘ನನಗೆ ನನ್ನ ಮಗ ಬೇಕು ಎಂದು ಕಣ್ಣೀರಾಕಿ ಹುಡುಕಾಟ ಮಾಡುತ್ತಿದ್ದಂತೆ ಸ್ಥಳೀಯರು ಸೇರಿಕೊಂಡು ನದಿಯಿಂದ ತಾಯಿಯನ್ನ ಹೊರತಂದಿದ್ದಾರೆ. ಬಳಿಕ ಮೃತರ ಶವ ಮೇಲೆತ್ತಿದ್ದು, ಘಟನೆ ಕುರಿತು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.