ಬೆಂಗಳೂರು: ಉತ್ತರ ಭಾರತೀಯರನ್ನು ಬೆಂಗಳೂರು ಬಿಟ್ಟು ಹೋಗಿ ಎನ್ನುತ್ತೀರಿ, ಆದರೆ ನಾವು ಬೆಂಗಳೂರು ತೊರೆದರೆ ಇಲ್ಲಿ ಏನು ಉಳಿಯುತ್ತದೆ? ಇಡೀ ಬೆಂಗಳೂರು ಖಾಲಿಯಾಗುತ್ತದೆ. ನಾವು ಇಲ್ಲ ಎಂದರೆ ನಿಮಗೆ ದುಡ್ಡು ಇರುವುದಿಲ್ಲ. ಪಿಜಿ, ಪಬ್ಗಳು ಖಾಲಿಯಾಗುತ್ತವೆ ಎಂದೆಲ್ಲ ಲೇವಡಿ ಮಾಡಿದ್ದ ಉತ್ತರ ಭಾರತದ ಮಹಿಳೆಗೆ ದೊಡ್ಡ ಶಾಕ್ ಎದುರಾಗಿದೆ.
ತನ್ನ ಇನ್ಸ್ಟಾಗ್ರಾಂ ರೀಲ್ಸ್ಗಳಲ್ಲಿ ಬೆಂಗಳೂರು ಹಾಗೂ ಕನ್ನಡವನ್ನು ಹೀಯಾಳಿಸುವಂತೆ ವಿಡಿಯೋಗಳನ್ನು ಮಾಡುತ್ತಿರುವ ಆಕೆಯನ್ನು ಕೆಲಸದಿಂದ ಕಿತ್ತುಹಾಕಲಾಗಿದೆ.

ಸುಗಂಧ ಶರ್ಮಾ ಎಂಬ ಮಹಿಳೆ ಮಾಡಿದ್ದ ಒಂದು ರೀಲ್ಸ್ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು. ಅದಕ್ಕೆ ಕನ್ನಡದ ನಟ, ನಟಿಯರು ಹಾಗೂ ಕಲಾವಿದರು ಕೂಡ ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು. ಮೊದಲು ನೀನು ಬೆಂಗಳೂರಿನಿಂದ ತೊಲಗು, ಯಾವುದು ಖಾಲಿಯಾಗುತ್ತದೆ ನೋಡೋಣ ಎಂದಿದ್ದರು. ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಗಮನಿಸಿದ್ದ ಆಕೆ, ಮತ್ತೊಂದು ವಿಡಿಯೋ ಮಾಡಿದ್ದಳು. ಅದರಲ್ಲಿಯೂ ದರ್ಪದ ಮಾತುಗಳನ್ನಾಡಿದ್ದಳು.
ಸುಗಂಧ ಶರ್ಮಾಳ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಯಾವ ಮಾಹಿತಿ ಇಲ್ಲದಿದ್ದರೂ, ಕನ್ನಡಪರ ಸಂಘಟನೆಯ ರೂಪೇಶ್ ರಾಜಣ್ಣ, ಆಕೆ ಕೆಲಸ ಮಾಡುವ ಸ್ಥಳದ ವಿವರಗಳನ್ನು ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ. ಸಂಸ್ಥೆ ಕಚೇರಿಗೆ ತೆರಳಿದ ಅವರು, ಅಲ್ಲಿನ ಅಧಿಕಾರಿಗಳ ಜತೆ ಮಾತನಾಡಿ, ಅಕೆ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮಾಡಿದ್ದಾರೆ.
“ಆಕೆಯ ಮೇಲೆ ಕ್ರಮ ಆಗುವವರೆಗೂ ನಾವು ವಿರಮಿಸುವುದಿಲ್ಲ. ಹಾಗೂ ಇನ್ನೊಂದು ಕಂಪೆನಿ ಆಕೆಯನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದರೆ, ಕೂಡಲೇ ಆಕೆಯನ್ನು ಕೆಲಸದಿಂದ ತೆಗೆದು ಅವರ ಊರಿಗೆ ಕಳಿಸಬೇಕು. ಇಲ್ಲವಾದರೆ ಅದನ್ನು ಹುಡುಕಿ ಕಂಪನಿ ವಿರುದ್ಧ ಹೋರಾಟ ಮಾಡುತ್ತೇವೆ. ಕನ್ನಡಿಗರ ವಿರುದ್ಧ ಸದಾ ಮಾತನಾಡುವ ಈಕೆ ಯಾವುದೇ ಕಾರಣಕ್ಕೂ ಬೆಂಗಳೂರಲ್ಲಿ ಇರಲು ಅವಕಾಶ ಇಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.