ಮಂಗಳೂರು: ಹಂಪನಕಟ್ಟೆ ಯಲ್ಲಿರುವ ವೆನ್ಲಾಕ್ ಜಿಲ್ಲಾಸ್ಪತ್ರೆಯ ನೂತನ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಕಟ್ಟಡ ಇತ್ತೀಚೆಗೆ ಉದ್ಘಾಟನೆಗೊಂಡಿದ್ದು, ಈ ಸ್ಥಳದಲ್ಲಿ ಗುಳಿಗ ದೈವದ ಸಾನ್ನಿಧ್ಯವಿತ್ತು ಎಂಬ ಹಿನ್ನೆಲೆಯಲ್ಲಿ ಉದ್ಘಾಟನೆಗೂ ಮೊದಲು ದೈವದ ಪುನರ್ ಪ್ರತಿಷ್ಠೆ ನಡೆಸಲಾಗಿದೆ. ಆ ಮೂಲಕ ನಂಬಿಕೆಯನ್ನು ಉಳಿಸುವ ಕಾರ್ಯವೂ ಆಗಿದೆ.
ದೈವಾರಾಧನೆಯ ನಂಬಿಕೆಗೆ ಅನುಸಾರವಾಗಿ, ಆಸ್ಪತ್ರೆಯಲ್ಲಿರುವ ಸಿಬಂದಿ ಹಾಗೂ ರೋಗಿಗಳಿಗೆ ಯಾವುದೇ ಸಮಸ್ಯೆ ಆಗಬಾರದು, ಋಣಾತ್ಮಕ ಶಕ್ತಿಯ ವಾತಾವರಣ ಇರಬಾರದು ಎಂಬ ಕಾರಣದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಗಮನಕ್ಕೂ ತರಲಾಗಿತ್ತು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ನೂತನ ಕಟ್ಟಡದ ಕಾಮಗಾರಿ ಆರಂಭವಾದ ಬಳಿಕ ಕೆಲವು ಕಾರ್ಮಿಕರಿಗೆ ಹಾಗೂ ಆಸ್ಪತ್ರೆ ಸಿಬಂದಿಗೆ ಸಮಸ್ಯೆ ಉಂಟಾಗಿತ್ತು. ಈ ಬಗ್ಗೆ ಅವರು ಅಧಿಕಾರಿಗಳಲ್ಲಿ ನೋವು ತೋಡಿಕೊಂಡು, ಪ್ರಶ್ನಾಚಿಂತನೆಯ ಸಲಹೆಯನ್ನೂ ನೀಡಿದ್ದರು. ಆ ಹಿನ್ನೆಲೆಯಲ್ಲಿ ನಡೆಸಿದ ಪ್ರಶ್ನೆ ಚಿಂತನೆಯಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಈ ಹಿಂದೆ ಗುಳಿಗ ದೈವದ ಸಾನ್ನಿಧ್ಯವಿತ್ತು ಎಂಬುದು ಗೊತ್ತಾಗಿದೆ ಎನ್ನಲಾಗಿದೆ.
ಕಾಮಗಾರಿ ವೇಳೆ ಅಲ್ಲಿದ್ದ ಮರಗಳನ್ನು ತೆರವುಗೊಳಿಸಲಾಗಿದೆ. ಪ್ರಶ್ನಾ ಚಿಂತನೆ ವೇಳೆ ಸಮಸ್ಯೆ ಕಂಡುಬಂದಿದೆ. (ಸ್ಥಳಕ್ಕೆ ಸಂಬಂಧಿಸಿದ ಗುಳಿಗ ಬೇರೆ ಕಡೆಗೆ ಹೋಗುವುದಿಲ್ಲ ಎಂಬ ನಂಬಿಕೆ ಇದೆ)
ತನ್ನ ಸಾನ್ನಿಧ್ಯವನ್ನು ತೆರವು ಮಾಡಿರುವುದರಿಂದ ಅದಕ್ಕೆ ನೆಲೆ ಇಲ್ಲದೆ ಸಮಸ್ಯೆ ಉಂಟಾಗಿದೆ ಎಂಬುದು ಪ್ರಶ್ನೆಯಲ್ಲಿ ಕಂಡುಬಂದಿತ್ತು. ಅಲ್ಲದೆ ಕಾಮಗಾರಿ ವೇಳೆ ನಾಗನ ಹತ್ಯೆಯೂ ನಡೆದಿರುವುದು ಗೊತ್ತಾಗಿತ್ತು. ಹಾಗಾಗಿ ಆಶ್ಲೇಷಾ ಬಲಿಯನ್ನೂ ನಡೆಸಲಾಗಿದೆ. ಬಳಿಕ ಆಸ್ಪತ್ರೆ ಕಟ್ಟಡ ಸಮೀಪದ ಅಶ್ವತ್ಥ ಮರದ ಬುಡದಲ್ಲಿ ಗುಳಿಗನನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.