ಮುಡಿಪು: ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಮುಡಿಪು ಜಂಕ್ಷನ್ ನಲ್ಲಿ ಶುಕ್ರವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಸದ್ಯ ದೇರಳಕಟ್ಟೆ ಫ್ಲ್ಯಾಟ್ ನಲ್ಲಿ ನೆಲೆಸಿರುವ ಸಿದ್ದಿಖ್ ಶುಕ್ರವಾರದ ಜುಮಾ ನಮಾಝ್ ಅನ್ನು ಕರೋಪಾಡಿ ಮಸೀದಿಯಲ್ಲಿ ನಡೆಸಿದ್ದರು. ಅಲ್ಲಿಂದ ವಾಪಸ್ಸು ದೇರಳಕಟ್ಟೆಗೆ ಬರುವ ದಾರಿಮಧ್ಯೆ ಮುಡಿಪು ಜಂಕ್ಷನ್ ನಲ್ಲಿ ಇಳಿದು, ಎಟಿಎಂ ಹಣ ಡ್ರಾ ಮಾಡಿದ್ದಾರೆ. ಅಲ್ಲಿಂದ ವಾಪಸ್ಸು ರಸ್ತೆ ದಾಟಿ ಬಸ್ಸನ್ನೇರಲು ಹೊರಟಾಗ ಮಂಗಳೂರು ಕಡೆಗೆ ಚಲಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ತಲೆ ಭಾಗಕ್ಕೆ ಗಂಭೀರ ಗಾಯಗೊಂಡ ಸಿದ್ದಿಖ್ ಅವರನ್ನು ನಾಟೆಕಲ್ ಕಣಚೂರು ಆಸ್ಪತ್ರೆಗೆ ದಾಖಲಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
ಸಿದ್ದಿಖ್ ಮುಂದಿನ ವಾರದಲ್ಲಿ ಮತ್ತೆ ಉದ್ಯೋಗ ನಿಮಿತ್ತ ಗಲ್ಫ್ ರಾಷ್ಟ್ರಕ್ಕೆ ಮರಳುವವರಿದ್ದರು. ಮೃತರು ತಂದೆ, ತಾಯಿ, ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.