Friday, June 27, 2025

ದಕ್ಷಿಣ ಕನ್ನಡ: ಮಿಸೆಸ್‌ ಇಂಡಿಯಾ ನ್ಯಾಷನಲ್ ಬ್ಯೂಟಿ ಸ್ಪರ್ಧೆಯಲ್ಲಿ ಮೊದಲ ರನ್ನರ್-ಅಪ್ ಕಿರೀಟ ಮುಡಿಗೇರಿಸಿಕೊಂಡ ಸುಪ್ರಿಯಾ

ಕಡಬ: ಸೌಂದರ್ಯ ಸ್ಪರ್ಧೆಯಲ್ಲಿ ಕರಾವಳಿ ಚೆಲುವೆಯರದ್ದೇ ಪಾರುಪತ್ಯ ಅಂದರೂ ತಪ್ಪಿಲ್ಲ. ತಮ್ಮ ಅಪೂರ್ವ ಚೆಲುವು ಮಾತ್ರವಲ್ಲದೆ, ಸೌಂದರ್ಯ ಸ್ಪರ್ಧೆಗೆ ಬೇಕಾದ ಸಕಲ ಮಾನದಂಡಗಳನ್ನು ಮೈಗೂಡಿಸಿಕೊಂಡು ಗೆದ್ದು ಬೀಗಿದವರು. ಐಶ್ವರ್ಯಾ ರೈ, ಶ್ರೀನಿಧಿ ಶೆಟ್ಟಿ, ಸಿನಿ ಶೆಟ್ಟಿ, ದೀವಿತಾ ರೈ, ಹೀಗೆ ಹಲವಾರು ಮಂದಿ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಬೀಗಿದ ದಕ್ಷಿಣ ಕನ್ನಡ ಜಿಲ್ಲೆಯವರು.

ಪುಣೆಯ ಹಯಾತ್ ರಿಜೆನ್ಸಿಯಲ್ಲಿ ಮೇ.26ರಂದು ನಡೆದ 2024ನೇ ಸಾಲಿನ ಮಿಸೆಸ್‌ ಇಂಡಿಯಾ ನ್ಯಾಷನಲ್ ಬ್ಯೂಟಿ ಸ್ಪರ್ಧೆಯಲ್ಲಿ ಕಡಬ ತಾಲೂಕು ಎಡಮಂಗಲದ ಮರ್ದೂರು ಮನೆಯ ಮೋಹನ್ ಎಂ. ಹಾಗೂ ಗುಣಾವತಿ ಕೆ.ಕೆ.ದಂಪತಿಯ ಪುತ್ರಿ ಸುಪ್ರಿಯಾ ಮೋಹನ್‌ರವರು ಮೊದಲ ರನ್ನರ್-ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ವಿವಿಧ ಆಕರ್ಷಣೆಗಳನ್ನ ಹೊಂದಿದ್ದ ಮಿಸೆಸ್ ಇಂಡಿಯಾ ನ್ಯಾಷನಲ್ ಬ್ಯೂಟಿ ಸ್ಪರ್ಧೆಯ ಫೈನಲ್‌ನಲ್ಲಿ 14 ಸ್ಪರ್ಧಿಗಳು ಭಾಗವಹಿಸಿದ್ದರು. ಆಡಿಷ್‌ನಲ್ಲಿ ಭಾಗವಹಿಸಿದ್ದ ನೂರಾರು ಗೃಹಿಣಿಯರಲ್ಲಿ ಅಂತಿಮವಾಗಿ 14 ಜನರನ್ನ ಮಾತ್ರ ಫೈನಲ್‌ಗೆ ಆಯ್ಕೆ ಮಾಡಲಾಗಿತ್ತು. ಮೇ 22 ರಿಂದ 25 ರ ತನಕ ನಡೆದ ಫೈನಲ್ ಇವೆಂಟ್ ಮೂರು ಸುತ್ತುಗಳನ್ನು ಒಳಗೊಂಡಿತ್ತು. ಸಾಂಸ್ಕೃತಿಕ, ವ್ಯಕ್ತಿಯಾಧಾರಿತ, ವಿಷಯಾಧಾರಿತ, ಸಂದೇಶ ಆಧಾರಿತ ಉಡುಪು ಹೀಗೆ ಸ್ಪರ್ಧಿಗಳ ಆಯ್ಕೆಯ ಅನುಸಾರ ಮೊದಲ ಸುತ್ತನ್ನು ರೂಪಿಸಿತ್ತು. ಈ ಮೂರು ಸುತ್ತುಗಳಲ್ಲಿಯೂ ಅತ್ಯುತ್ತಮ ಪ್ರತಿಭೆ ತೋರಿದ ಸ್ಪರ್ಧಿಗೆ ವೈಯಕ್ತಿಕ ಟೈಟಲ್ ನೀಡಲಾಯಿತು. ಇದರಲ್ಲಿ ಇವರಿಗೆ ಮಿಸೆಸ್ ಇಂಡಿಯಾ ನ್ಯಾಷನಲ್ ಬ್ಯೂಟಿ ಮೊದಲ ರನ್ನರ್-ಅಪ್ ಕಿರೀಟ ದೊರೆಯಿತು. ಇದರೊಂದಿಗೆ ಬೆಸ್ಟ್ ಕ್ಯಾಟ್ ವಾಕರ್ ವಿನ್ನ‌ರ್ ಪ್ರಶಸ್ತಿ ಪಡೆದುಕೊಂಡರು ಸುಪ್ರಿಯಾ.

ಸುಪ್ರಿಯಾ ಮೋಹನ್‌ರವರು ವೃತ್ತಿಯಲ್ಲಿ ಸಾಫ್ಟ್‌ವೇ‌ರ್ ಇಂಜಿನಿಯರ್ ಆಗಿದ್ದು, ಯುಎಸ್ ನ ಐಟಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಮಡಿಕೇರಿ ತಾಲೂಕು ಪಾನತ್ತಲೆ ಮನೆಯ ಅರ್ಜುನ್ ಪಿ.ಜೆಯವರನ್ನು ವಿವಾಹವಾಗಿದ್ದು, 5ವರ್ಷದ ಮಗ ಜಶ್ಚಿಕ್‌ರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇದೊಂದಿಗೆ ಇವರು ಪ್ರೊಫೆಷನಲ್ ಬ್ರೆಡಲ್ ಮೇಕಪ್ ಆರ್ಟಿಸ್ಟ್ ಕೂಡ ಹೌದು.

Related Articles

Latest Articles