ಬೆಳ್ತಂಗಡಿ: ಕಾಡಿನಲ್ಲಿ ಪುಟ್ಟ ಕಂದಮ್ಮನನ್ನು ಬಿಟ್ಟು ಹೋದ ಹೃದಯ ವಿದ್ರಾವಕ ಘಟನೆ ನಡೆದಿದೆ. ಬೆಳಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡೋಳುಕೆರೆ ಎಂಬಲ್ಲಿ ಕಾಡಿನ ಮಧ್ಯೆ ಮೂರು-ನಾಲ್ಕು ತಿಂಗಳ ಹೆಣ್ಣು ಮಗುವನ್ನು ಬಿಟ್ಟುಹೋದ ಘಟನೆ ಮಾರ್ಚ್ 22ರ ಬೆಳಗ್ಗೆ ಬೆಳಕಿಗೆ ಬಂದಿದೆ. ಮಗು ಅಳುತ್ತಿರುವ ದೃಶ್ಯ ಕರಳು ಹಿಂಡುವಂತಿದೆ. ಈ ದೃಶ್ಯ ಕಂಡು ಬಿಟ್ಟು ಹೋದವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಪುಟ್ಟ ನಾಯಿ ಮರಿಗಳನ್ನು ಬೀದಿಯಲ್ಲಿ ಬಿಡಲು ಹಿಂದು ಮುಂದು ನೋಡುವವರ ನಡುವೆಯೂ ಈ ಘಟನೆ ಬೇಸರ ತರಿಸಿದೆ.
ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಗುವಿನ ಅಳುವ ಶಬ್ಧ ಕೇಳಿ ಸ್ಥಳಕ್ಕೆ ಹೋದಾಗ ಮಗು ಪತ್ತೆಯಾಗಿದೆ. ಬೆಳಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡ್ರೊಟ್ಟು ರಸ್ತೆಯ ಕೊಡೋಳುಕೆರೆ ಬಳಿ ಸುತ್ತಮುತ್ತಲಿನ ನಿವಾಸಿಗಳಿಗೂ ದಾರಿಹೋಕ ಮಹಿಳೆಯೊಬ್ಬಳಿಗೂ ಮಗುವಿನ ಅಳುವ ಶಬ್ಧ ಕೇಳಿ, ತಕ್ಷಣವೇ ಬೆಳಾಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾ ಅವರಿಗೆ ಮಾಹಿತಿ ನೀಡಲಾಗಿದೆ.
ವಿಷಯ ತಿಳಿದ ವಿದ್ಯಾ ಅವರು ಕೂಡಲೇ ಸ್ಥಳಕ್ಕೆ ಧಾವಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಧರ್ಮಸ್ಥಳ ಆರೋಗ್ಯಾಧಿಕಾರಿ ಮಂಜು ಅವರು ಕೂಡಲೇ ಮಗುವಿನ ಆರೋಗ್ಯ ತಪಾಸಣೆ ನಡೆಸಿದ್ದು, ಮಗು ಸಂಪೂರ್ಣ ಆರೋಗ್ಯವಾಗಿರುವುದಾಗಿ ದೃಢಪಡಿಸಿದ್ದಾರೆ. ಹೀಗಾಗಿ ಮಗುವನ್ನು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.
ಮಗುವನ್ನು ಯಾರು ಬಿಟ್ಟುಹೋದರು? ಏಕೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಈಗ ನಡೆಯುತ್ತಿದೆ. ಕಾಡಿನಲ್ಲಿ ಮಗು ಪತ್ತೆಯಾಗಿರುವ ಈ ವಿಚಿತ್ರ ಘಟನೆಯು ಹಲವಾರು ಪ್ರಶ್ನೆಗಳನ್ನು ಹುಟ್ಟಿಸಿದೆ. ಬಿಟ್ಟು ಹೋದವರಿಗೆ ಹಿಡಿ ಶಾಪಹಾಕುತ್ತಿದ್ದಾರೆ. ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ ಭಾರೀ ವಿರೋಧ ವ್ಯಕ್ತವಾಗಿದೆ.