Friday, June 27, 2025

ಕಾಸರಗೋಡು: ರಾತ್ರಿ ವೇಳೆ ಮನೆಗೆ ಬಂದು ಮಾವನಿಗೆ ಹಲ್ಲೆ; ಉಳ್ಳಾಲ ಮೂಲದ ಆರೋಪಿ ಅಳಿಯ ಅರೆಸ್ಟ್

ಕುಂಬಳೆ: ಹೆಣ್ಣು ಕೊಟ್ಟ ಮಾವನನ್ನೇ ಕಬ್ಬಿಣದ ಸರಳಿನಿಂದ ಹೊಡೆದು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಳೆ ವ್ಯಕ್ತಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ದೇರಳಕಟ್ಟೆ ನಿವಾಸಿ ಅನ್ವರ್ (32) ಎಂಬಾತ ಬಂಧಿತ ಆರೋಪಿ.

ದಂಡೆಗೋಳಿ ಕಿದೂರು ನಿವಾಸಿ ಮುಹಮ್ಮದ್ ಯೂಸಫ್ ಎಂಬವರ ಮಗಳನ್ನು ದೇರಳಕಟ್ಟೆ ನಿವಾಸಿ ಅನ್ವರ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು.

ಪ್ರಕರಣದ ವಿವರ:
ಸೆ. 28 ರಂದು ಮಾವನ ಮನೆಗೆ ಬಂದ ಅನ್ವರ್ ಶನಿವಾರ ಮುಂಜಾನೆ 1 ಗಂಟೆ ವೇಳೆ ಯೂಸಫ್‌ರ ಮನೆಗೆ ತಲುಪಿ ಕಾಲಿಂಗ್ ಬೆಲ್ ಮಾಡಿ ಹಾಗೂ ಕಿಟಕಿಗೆ ಬಡಿದು ಮನೆಯವರನ್ನು ಎಬ್ಬಿಸಿದ್ದನು. ನಿರಂತರ ಕಾಲಿಂಗ್ ಬೆಲ್ ಮಾಡಿದ ಹಿನ್ನೆಲೆಯಲ್ಲಿ ಯೂಸಫ್ ಬಾಗಿಲು ತೆರೆದು ಹೊರಗೆ ಬಂದಿದ್ದಾರೆ.

ಈ ವೇಳೆ ಅನ್ವರ್ ಮಾವನ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಕಬ್ಬಿಣದ ಸರಳಿನಿಂದ ತಲೆಗೆ ಬಡಿಯಲು ಯತ್ನಿಸಿದ್ದಾನೆ. ಆದರೆ ಹೊಡೆತದಿಂದ ತಪ್ಪಿಸಿಕೊಂಡಿರುವುದರಿಂದ ಅಪಾಯದಿಂದ ಪಾರಾಗಿರುವುದಾಗಿ ಯೂಸಫ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪುತ್ರಿ ತಫ್ಸೀರಾಳನ್ನು ಮದುವೆಯಾದ ಬಳಿಕ ಒಂದು ವರ್ಷ ಕಾಲ ಅನ್ವರ್ ಉತ್ತಮ ರೀತಿಯಲ್ಲಿದ್ದನು. ಬಳಿಕ ಮದ್ಯ ಸೇವಿಸಿ ಬಂದು ಮನೆಯಲ್ಲಿ ಹಲ್ಲೆಗೈಯ್ಯಲು ಪ್ರಯತ್ನಿಸತೊಡಗಿದ್ದಾನೆಂದು ಮನೆಯವರು ದೂರಿದ್ದಾರೆ. ಈತನ ಉಪಟಳ ತೀವ್ರವಾದ ಹಿನ್ನೆಲೆಯಲ್ಲಿ ಆರು ತಿಂಗಳ ಹಿಂದೆ ಯೂಸಫ್ ಮಗಳನ್ನು ಸ್ವಂತ ಮನೆಗೆ ಕರೆದುಕೊಂಡು ಬಂದಿದ್ದಾರೆನ್ನಲಾಗಿದೆ. ಕಳೆದ ತಿಂಗಳು ಕೂಡಾ ಅನ್ವರ್ ಮನೆಗೆ ತಲುಪಿ ದಾಂಧಲೆ ನಡೆಸಿರುವುದಾಗಿ ದೂರಲಾಗಿದೆ. ನ್ಯಾಯಾಲಯದಲ್ಲಿ ಹಾಜರುಪಡಿಸಿದ ಅನ್ವರ್‌ಗೆ ರಿಮಾಂಡ್ ವಿಧಿಸಲಾಗಿದೆ.

ಕುಂಬಳೆ ಎಸ್‌ಐ ಶ್ರೀಜೇಶ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ಆರೋಪಿ ವಿರುದ್ಧ ಐಪಿಸಿ ೩೦೮ ಪ್ರಕಾರ ಕೇಸು ದಾಖಲಿಸಲಾಗಿದೆ.

Related Articles

Latest Articles