Sunday, May 18, 2025

ಕಾಸರಗೋಡು: ಜೈಲಿನಲ್ಲಿ ಖೈದಿಗಳ ನಡುವೆ ಹೊಡೆದಾಟ; ಓರ್ವನಿಗೆ ಗಂಭೀರ ಗಾಯ

ಕಾಸರಗೋಡು: ಖೈದಿಗಳ ಮಧ್ಯೆ ಘರ್ಷಣೆ ಉಂಟಾಗಿ ಓರ್ವ ಖೈದಿ ಗಂಭೀರ ಗಾಯಗೊಂಡ ಘಟನೆ ಹೊಸದುರ್ಗ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

ಅಬಕಾರಿ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಬೇಳ ಕಟ್ಟತ್ತಂಗಡಿ ಪೆರಿಯಡ್ಕ ನಿವಾಸಿ ಪಿ.ಎಸ್. ಮನು ಎಂಬಾತ ಘರ್ಷಣೆಯಲ್ಲಿ ಗಾಯಗೊಂಡಿದ್ದಾನೆ. ಆತನನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈತನ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿ ಜಿಲ್ಲಾ ಜೈಲು ಸುಪರಿಂಟೆಂಡೆಂಟ್ ವಿನೀತ್‌ ಎ ಪಿಳ್ಳೆ ನೀಡಿದ ದೂರಿನಂತೆ ಮೈಲಾಟಿ ಪೂವಲ್‌ ಕೆ.ಕೆ. ನಿಲ ಯದ ಶರಣ್ ಎಂಬಾತನ ವಿರುದ್ಧ ಹೊಸದುರ್ಗ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ಶರಣ್‌ನನ್ನು ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈ ಹಿಂದೆ ಬಂಧಿಸಿದ ಬಳಿಕ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಬದಿಯಡ್ಕ ಅಬಕಾರಿ ರೇಂಜ್ ಕಚೇರಿಯಲ್ಲಿ ದಾಖಲುಗೊಂಡ ಅಬಕಾರಿ ಪ್ರಕರಣವೊಂದಕ್ಕೆ ಸಂಬಂಧಿಸಿ ಮನುವನ್ನು ಬಂಧಿಸಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು.

ಜು. 16 ರಂದು ಯಾವುದೋ ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿ ಜೈಲಿನಲ್ಲಿ ಮನು ಮತ್ತು ಶರಣ್ ನಡುವೆ ವಾಗ್ವಾದ ನಡೆದಿದ್ದು, ಅದು ನಂತರ ಹೊಡೆದಾಟದ ಹಂತ ತಲುಪಿದೆ. ಆಗ ಶರಣ್ ಮನುವಿನ ತಲೆಯನ್ನು ಬಲವಾಗಿ ಗೋಡೆಗೆ ಬಡಿದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಮನು ಅಲ್ಲೇ ಕುಸಿದು ಬಿದ್ದಿದ್ದಾನೆನ್ನಲಾಗಿದೆ.

ಅದನ್ನು ಕಂಡ ಜೈಲು ಸಿಬ್ಬಂದಿಗಳು ತಕ್ಷಣ. ಆತನನ್ನು ಮೊದಲು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಸಾಗಿಸಿ, ನಂತರ ಅಲ್ಲಿಂದ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಶರಣ್‌ನನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.‌

Related Articles

Latest Articles