ಕಾಸರಗೋಡು: ಬೇಡಡ್ಕದಲ್ಲಿ ಅಂಗಡಿಗೆ ಬೆಂಕಿ ಹಚ್ಚಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೃತಪಟ್ಟಿದ್ದಾರೆ. ವೈಷಮ್ಯದಿಂದ ಈ ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಬೇಡಡ್ಕ ಮನ್ನಡ್ಕದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಸಿ.ರಮಿತಾ (32) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆಯ ವಿವರ
ಸಮೀಪದಲ್ಲೇ ಇದ್ದ ತಮಿಳುನಾಡಿನ ಅಂಗಡಿಯ ರಾಮಾವೃತ್ ಎಂಬಾತ ಕೃತ್ಯ ಎಸಗಿದ್ದಾನೆ. ರಾಮವೃತ್ ಕುಡಿದು ಕಿರುಕುಳ ನೀಡುತ್ತಿದ್ದಾನೆ ಎಂದು ಬೇಡಡ್ಕ ಪೊಲೀಸರಿಗೆ ದೂರು ಕೊಟ್ಟಿದ್ದರು.
ದೂರು ಕೊಟ್ಟ ಹಿನ್ನಲೆ, ಅದೇ ವೈಷಮ್ಯದಿಂದ ಪಾನಮತ್ತನಾಗಿ ಅಂಗಡಿಗೆ ಬಂದು ಬೆಂಕಿ ಹಚ್ಚಿದ್ದಾನೆ. ರಮಿತಾ ಮೈಮೇಲೆ ಟಿನ್ನರ್ ಸುರಿದು ಬೆಂಕಿ ಹಚ್ಚಿದ್ದಾನೆ.
ಏ. 8ರಂದು ಮಧ್ಯಾಹ್ನ 3.30ರ ಸುಮಾರಿಗೆ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿದ್ದ ಆರೋಪಿ ಬೆಂಕಿ ಹಚ್ಚಿದ್ದಾನೆ. ಕೃತ್ಯ ಎಸಗಿ ಸ್ಥಳದಿಂದ ಓಡಿಹೋಗಲು ಯತ್ನಿಸಿದಾಗ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಹಿಳೆಯೊಂದಿಗಿದ್ದ ಆತನ ಎಂಟು ವರ್ಷದ ಮಗ ಮತ್ತು ಆತನ ಸಹಪಾಠಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ರಮಿತಾ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ರಮಿತಾ ಅಸುನೀಗಿದ್ದಾರೆ.