ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೈದಾನ ಪ್ರವೇಶಿಸಿದ್ದ ಯುವಕನಿಗೆ ಥಳಿಸಿದ್ದನ್ನು ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ಮರಿಲಿಂಗಗೌಡಮಾಲಿ ಪಾಟೀಲ್ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಮಾನವೀಯತೆ ಮರೆತು ಲಕ್ಷಾಂತರ ಜನರ ಮುಂದೆ ಯುವಕನಿಗೆ ಥಳಿಸಿದ್ದಾರೆ. ಹಲ್ಲೆ ಮಾಡಲು ಇವರಿಗೆ ಏನು ಹಕ್ಕಿದೆ? ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೇ ಹೊರತು ಹಲ್ಲೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಹೀಗಾಗಿ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

ಮಾರ್ಚ್ 25 ರಂದು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿತ್ತು. ವಿರಾಟ್ ಕೊಹ್ಲಿ ಬ್ಯಾಟಿಂಗ್ ಬರುತ್ತಿದ್ದಂತೆ ಅಭಿಮಾನಿಯೊಬ್ಬ ಹೈ ಸೆಕ್ಯೂರಿಟಿ ಮಧ್ಯೆಯೂ ಕ್ರೀಸ್ ಒಳಗಡೆ ನುಗ್ಗಿ ಕೊಹ್ಲಿ ಕಾಲು ಹಿಡಿದು ಹುಚ್ಚಾಟ ನಡೆಸಿದ್ದ.

ಕೊಹ್ಲಿ ಬರುವುದನ್ನೇ ಕಾಯುತ್ತಿದ್ದ ಅಭಿಮಾನಿ ಎಲ್ಲಾ ರೂಲ್ಸ್ಗಳನ್ನು ಮುರಿದು ಕ್ರೀಸ್ ಒಳಗಡೆ ನುಗ್ಗಿ ಏಕಾಏಕಿ ಕೊಹ್ಲಿ ಕಾಲಿಗೆ ಬಿದ್ದು ಬಳಿಕ ಅಪ್ಪಿಕೊಳ್ಳಲು ಪ್ರಯತ್ನಿಸಿದ್ದ. ಕೂಡಲೇ ಒಳನುಗ್ಗಿದ ಅಭಿಮಾನಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ನಂತರ ಮೈದಾನ ದಿಂದ ಹೊರಗೆ ಕರೆತಂದು ಸಿಬ್ಬಂದಿ ಥಳಿಸಿದ್ದರು. ಥಳಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮೈದಾನ ಪ್ರವೇಶಿಸಿದ ಯುವಕನನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದರು. ಮೈದಾನದೊಳಗೆ ನುಗ್ಗಿದವ 17 ವರ್ಷದ ಯುವಕನಾಗಿದ್ದು ಆರ್ಸಿಬಿ ಪಂದ್ಯ ನೋಡಲು ರಾಯಚೂರಿನಿಂದ ರೈಲಿನಲ್ಲಿ ಆಗಮಿಸಿದ್ದ ಎಂದು ತಿಳಿಸಿದ್ದಾರೆ. ವಿರಾಟ್ ಕೊಹ್ಲಿ ಹುಚ್ಚು ಅಭಿಮಾನಿಯಾಗಿರುವ ಈತ ಈ ಪಂದ್ಯ ನೋಡಲು 3 ಸಾವಿರ ರೂಪಾಯಿ ಕೊಟ್ಟು ಡಿ ಬ್ಲಾಕ್ ಟಿಕೆಟ್ ಖರೀದಿಸಿದ್ದ.