ಪ್ರಾಣದ ಹಂಗು ತೊರೆದು ಶ್ವಾನವೊಂದು ಅನ್ನ ಹಾಕಿ ಸಲಹಿದ ಯಜಮಾನನ ಪ್ರಾಣ ರಕ್ಷಿಸಿದ ಘಟನೆ ಚಿತ್ರದುರ್ಗ ಚಳ್ಳಕೆರೆಯಲ್ಲಿ ನಡೆದಿದೆ. ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮದ ರೈತ ಡಾ.ಆರ್ ಎ.ದಯಾನಂದಮೂರ್ತಿ ತೋಟದಲ್ಲಿ ನಡೆದ ಘಟನಯಾಗಿದೆ.
ದಯಾನಂದ ಮೂರ್ತಿ ತೋಟದಲ್ಲಿ ಕೆಲಸ ಮುಗಿಸಿ ಬೇಸಿಗೆಯ ಬಿಸಿಲಿಗೆ ಮಾವಿನ ಮರದಡಿ ವಿಶ್ರಾಂತಿ ಪಡೆಯುತ್ತಾ ನಿದ್ರೆಗೆ ಜಾರಿದ್ದಾರೆ. ಇಂತಹ ಸಮಯದಲ್ಲಿ ನಾಗರಹಾವೊಂದು ರೈತನ ಕಡೆ ಬರಲು ಆರಂಭಿಸಿದೆ. ಇದನ್ನು ಗಮನಿಸಿದ ಸಾಕು ನಾಯಿ ಜಾನಿ ತನ್ನ ಯಜಮಾನನ ಕಡೆ ಹಾವು ನುಸಳದಂತೆ ಅಡ್ಡಗಟ್ಟಿ ಬೊಗಳುತ್ತಾ ನಾಗರ ಹಾವನ್ನು ಹಿಮ್ಮೆಟ್ಟಿಸಿದೆ.

ಜಾನಿ ಬೊಗಳುವುದನ್ನು ಕೇಳಿಸಿಕೊಂಡ ರೈತ ದಯಾನಂದ ಮೂರ್ತಿ ಎಚ್ಚರಗೊಂಡಿದ್ದಾರೆ. ಆಗ ನಾಗರಹಾವೊಂದು ಹೆಡೆ ಬಿಚ್ಚಿಕೊಂಡು ಜಾನಿಯೊಡನೆ ಕಾಳಗದಲ್ಲಿ ತೊಡಗಿದ್ದು, ತನ್ನ ಪ್ರಾಣ ಉಳಿಸಿದ ನಾಯಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ದೇವರನ್ನು ನೆನೆದಿದ್ದಾರೆ.
ನಾಗರ ಹಾವು, ಹಾಗೂ ನಾಯಿ ಕಾಳಗದ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಯಿಡಿದಿದ್ದಾರೆ. ಸದ್ಯ ನಿಯತ್ತಿಗೆ ಇನ್ನೊಂದು ಹೆಸರಾಗಿರುವ ಶ್ವಾನದ ಯಜಮಾನನ ಮೇಲಿರುವ ಭಕ್ತಿಗೆ ಎಲ್ಲರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.