ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಿದೆ. ಜಲಮೂಲಗಳು ಭರ್ತಿಯಾಗಿದೆ. ನದಿತಟದ ಪ್ರದೇಶಗಳು ಮುಳುಗಡೆಯಾಗಿದೆ. ಇಂದು (ಜೂ.27) ಮುಂಜಾನೆಯಿಂದ ಭಾರೀ ಅವಘಡಗಳು ಸಂಭವಿಸಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ವಿದ್ಯುತ್ ಶಾಕ್ ತಗುಲಿ ಮೂವರು ಮೃತಪಟ್ಟ ಘಟನೆ ವರದಿಯಾಗಿದೆ.
ಬೆಳ್ತಂಗಡಿ: ಸ್ಟೇ ವಯರ್ ಗೆ ವಿದ್ಯುತ್ ಸ್ವರ್ಶಿಸಿ ಯುವತಿ ಸಾವನ್ನಪ್ಪಿದ ಘಟನೆ ಶಿಬಾಜೆ ಗ್ರಾಮದ ಬರ್ಗುಲಾದಲ್ಲಿ ನಡೆದಿದೆ. ಗಣೇಶ್ ಶೆಟ್ಟಿ ಮತ್ತು ರೋಹಿಣಿ ದಂಪತಿಗಳ ಪುತ್ರಿ ಪ್ರತೀಕ್ಷಾ (೨೦) ಮೃತ ಯುವತಿ. ಮನೆಯ ರಸ್ತೆಗೆ ಪಾರ್ಸೆಲ್ ಬಂದಿದ್ದರಿಂದ ಅದನ್ನು ಪಡೆಯಲು ರಸ್ತೆಗೆ ಬಂದಾಗ ನೀರಿನಲ್ಲಿದ್ದ ಸ್ಟೇ ವಯರ್ ಸ್ಪರ್ಶಿಸಿ ಯುವತಿ ಅಸುನೀಗಿದ್ದಾಗಿ ವರದಿಗಳು ತಿಳಿಸಿದೆ.
ಮಂಗಳೂರು: ವಿದ್ಯುತ್ ತಂತಿ ಕಡಿದು ಬಿದ್ದು ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ರೊಸಾರಿಯೋ ಬಳಿ ನಡೆದಿದೆ. ಮೃತರನ್ನು ಉಪ್ಪಿನಂಗಡಿ ಸಮೀಪದ ರಾಮಕುಂಜದ ನಿವಾಸಿ ದೇವರಾಜ್ ಗೌಡ ಮತ್ತು ಹಾಸನ ಮೂಲದ ರಾಜು ಪಾಲ್ಯ ಎಂದು ಗುರುತಿಸಲಾಗಿದೆ. ಮಳೆ ಸಂಬಂಧಿ ಕಾರಣಕ್ಕೆ ಈ ಸಾವು ಸಂಬಂಧಿಸಿದೆ ಎಂದು ತಿಳಿದು ಬಂದಿದೆ.