ಬದಿಯಡ್ಕ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗೃಹಿಣಿಯ ಕೊರಳಲ್ಲಿದ್ದ ಚಿನ್ನದ ಸರವನ್ನು ಕಳ್ಳರು ಎಗರಿಸಿದ ಘಟನೆ ನಡೆದಿದೆ. ಶನಿವಾರ ಬೆಳಗ್ಗೆ 11.30ರ ಸುಮಾರಿಗೆ ಎಣ್ಮಕಜೆ ಗ್ರಾಮ ಪಂಚಾಯಿತಿ ಸಮೀಪದ ಪೆರ್ಲ ಬಜಕೂಡ್ಲು ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಶೇಣಿ ಮಾನಂಗಲ್ಲ ಮನೆಯ ಕುಂಜಿ ನಾಯ್ಕರ ಪತ್ನಿ ಸುಲೋಚನಾ (54) ಎಂಬುವರು ಆರೋಗ್ಯ ಕೇಂದ್ರದಿಂದ ಮಾತ್ರೆಗಳನ್ನು ತೆಗೆದುಕೊಂಡು ಹಿಂದಿರುಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳ ಸರ ಕದ್ದೊಯ್ದಿದ್ದಾರೆ. ಬಜಕೂಡ್ಲು ಕಡೆಯಿಂದ ದ್ವಿಚಕ್ರವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ಹಾರ ಎಳೆದು ರಸ್ತೆಗೆ ತಳ್ಳಿದ್ದಾನೆ. ಸುಲೋಚನಾ ಅವರು ನೀಡಿದ ದೂರಿನ ಆಧಾರದ ಮೇಲೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.