ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯ ಪಿಯು ವಸತಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಓದಿನಲ್ಲಿ ಮುಂದಿದ್ದ ವಿದ್ಯಾರ್ಥಿನಿ ದೀಪಿಕಾ, ವಿಜ್ಞಾನ ವಿಭಾಗದಲ್ಲಿ ಪಿಸಿಎಂಸಿ ಓದುತ್ತಿದ್ದಳು. ಪತ್ರ ಬರೆದಿಟ್ಟು, ತನ್ನ ಜೀವ ತಾನೇ ಕಳೆದುಕೊಂಡಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ದೀಪಿಕಾ ಮೂಲತಃ ಶಿರಾ ತಾಲೂಕಿನ ಕುಂಟೆಗೌಡನಹಳ್ಳಿ ನಿವಾಸಿ. ಖಾಸಗಿ ಪಿಯು ಕಾಲೇಜಿನಲ್ಲಿ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದು, ಈಗಾಗಲೇ ಕನ್ನಡ ಮತ್ತು ಗಣಿತ ಪರೀಕ್ಷೆ ಬರೆದಿರುವ ವಿದ್ಯಾರ್ಥಿನಿ ಬೌತಶಾಸ್ತ್ರ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಆದ್ರೆ ಮಾ. 6ರ ಮಧ್ಯಾಹ್ನ 12:30ರ ಸುಮಾರಿಗೆ ಟೆರೆಸ್ನಲ್ಲಿ ಪತ್ರ ಬರೆದಿಟ್ಟು, ವೇಲಿನಿಂದ ನೇಣು ಬಿಗಿದು ಸಾವಿಗೆ ಶರಣಾಗಿದ್ದಾಳೆ.
ಸ್ನೇಹಿತರು ಟೆರೆಸ್ಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಬಂದ ಉಪನ್ಯಾಸಕರು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿನ ವೈದ್ಯರು ಜಿಲ್ಲಾಸ್ಪತ್ರೆಗೆ ಕೊಂಡೊಯ್ಯುವAತೆ ಸೂಚಿಸಿದ್ದಾರೆ. ಅಷ್ಟರಲ್ಲೇ ಪ್ರಾಣಪಕ್ಷಿ ಹಾರಿ ಹೋಗಿದೆ.
ಇನ್ನು ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಗಳು ಚೆನ್ನಾಗಿಯೇ ಓದುತ್ತಿದ್ದು, ಟಾಪರ್ ಆಗಿದ್ದಳು. ಮಗಳನ್ನು ಆಸ್ಪತ್ರೆಗೆ ಕರೆದುಕೊಂಡ ಮೇಲೆ ನಮಗೆ ಕಾಲ್ ಮಾಡಿದ್ದಾರೆ. ಪತ್ರ ಇದೆ ಅಂತಾರೆ. ಆದ್ರೆ ಅದನ್ನ ನಮಗೆ ತೋರಿಸ್ತಾ ಇಲ್ಲ ಎಂದು ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.