Friday, March 21, 2025

ಕರ್ತವ್ಯಲೋಪ: ಮೂವರು ಪಿಎಸ್‌ಐ, ಒಬ್ಬರು ಎಎಸ್‌ಐ ಅಮಾನತು

ಕರ್ತವ್ಯಲೋಪ ಆರೋಪದ ಮೇಲೆ ತುಮಕೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಮೂವರು ಸಬ್‌ಇನ್ಸ್‌ಪೆಕ್ಟರ್, ತಲಾ ಒಬ್ಬರು ಸಹಾಯಕ ಸಬ್‌ಇನ್ಸ್‌ಪೆಕ್ಟರ್, ಕಾನ್‌ಸ್ಟೇಬಲ್ ಅಮಾನತು ಮಾಡಲಾಗಿದೆ.

ತುರುವೇಕೆರೆ ಪೊಲೀಸ್ ಠಾಣೆ ಸಬ್‌ಇನ್ಸ್ಪೆಕ್ಟರ್‌ಗಳಾದ ಗಣೇಶ್, ರಾಮಚಂದ್ರಯ್ಯ, ಹೆಡ್ ಕಾನ್‌ಸ್ಟೇಬಲ್ ರಘುನಂದನ್, ಮಧುಗಿರಿ ತಾಲ್ಲೂಕು ಬಡವನಹಳ್ಳಿ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ನಾಗರಾಜು, ಎಎಸ್‌ಐ ಸುರೇಶ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಆದೇಶಿಸಿದ್ದಾರೆ.

ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಕಾಣೆಯಾಗಿದ್ದು, ದೂರು ನೀಡಿದ್ದರೂ ಪ್ರಕರಣ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್, ಹೆಡ್ ಕಾನ್‌ಸ್ಟೇಬಲ್ ಅಮಾನತು ಮಾಡಲಾಗಿದೆ.

ಮಧುಗಿರಿ ತಾಲ್ಲೂಕು ಬಡವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯವರ ಮೇಲೆ ಸವರ್ಣೀಯರು ಹಲ್ಲೆ ಮಾಡಿದ್ದು, ಈ ಸಂಬಂಧ ಸಂತ್ರಸ್ತರು ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸದೆ ನಿರ್ಲಕ್ಷ್ಯ ತೋರಿದ್ದರು. ಹಾಗಾಗಿ ಸಬ್‌ಇನ್ಸ್‌ಪೆಕ್ಟ‌ರ್, ಎಎಸ್‌ಐ ಅಮಾನತುಗೊಂಡಿದ್ದಾರೆ.

Related Articles

Latest Articles