ತುಮಕೂರು: ಮನೆಯ ಅಂಗಳದಲ್ಲಿ ಆಟವಾಡ್ತಿದ್ದ ಬಾಲಕ ದುರಂತ ಅಂತ್ಯ ಕಂಡಿದ್ದಾನೆ. ಮಣ್ಣು ತುಂಬಿದ್ದ ಟ್ರ್ಯಾಕ್ಟರ್ ಯಮನಾಗಿ ಬಂದು ಪುಟ್ಟ ಕಂದಮ್ಮನ ಪ್ರಾಣ ಬಲಿ ಪಡೆದ ಘಟನೆ ವರದಿಯಾಗಿದೆ. ಜಿಲ್ಲೆಯ ಪಾವಗಡ ತಾಲೂಕಿನ ತಿಮ್ಮಮ್ಮನಹಳ್ಳಿ ಗ್ರಾಮದಲ್ಲಿ ಈ ಘೋರ ದುರಂತ ನಡೆದಿದ್ದು, ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ.
ಮನೆಯ ಅಂಗಳದಲ್ಲಿ ಆಟವಾಡ್ತಿದ್ದ ವರುಣ್ ಮೃತಪಟ್ಟ ಕಂದಮ್ಮ. ಮಾರ್ಚ್ ೧೫ರ ಸಂಜೆ ವರುಣ್ ಮನೆ ಮುಂದೆ ತನ್ನ ಪಾಡಿಗೆ ತಾನು ಆಟವಾಡುತ್ತಿದ್ದ. ಆಗ ಅಲ್ಲಿಗೆ ಬಂದ ಮಣ್ಣು ತುಂಬಿದ್ದ ಟ್ರ್ಯಾಕ್ಟರ್ ಸೀದಾ ಬಾಲಕನ ತಲೆ ಮೇಲೆ ಹರಿದಿದೆ. ಬಾಲಕನ ಮೇಲೆ ಟ್ರ್ಯಾಕ್ಟರ್ ಹರಿದ ಪರಿಣಾಮ 5 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮನೆ ಮುಂದೆ ನಗು, ನಗುತ್ತಿದ್ದ ವರುಣ್ನನ್ನು ಕಳೆದುಕೊಂಡ ಪೋಷಕರು ಚಿಂತಾಕ್ರಾಂತರಾಗಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ವೈ.ಎನ್ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ.