ದೇಶಾದ್ಯಂತ ಭುಗಿಲೆದ್ದಿರುವ ವಕ್ಫ್ ಆಸ್ತಿ ವಿವಾದ ಈಗ ಧಾರ್ಮಿಕ ಕೇಂದ್ರಗಳಿಗೂ ಭಯ ಆವರಿಸಿಕೊಳ್ಳುವಂತೆ ಮಾಡಿದೆ. ಅದಕ್ಕೆ ಶೃಂಗೇರಿ ಮಠವೂ ಹೊರತಾಗಿಲ್ಲ. ಸದ್ಯ ಶೃಂಗೇರಿ ಮಠ ಹಾಗೂ ವಕ್ಫ್ ಆಸ್ತಿ ಬಗ್ಗೆ ಟಿಪ್ಪು ಸುಲ್ತಾನ್ ವಂಶಸ್ಥ ಮನ್ಸೂರ್ ಆಲಿ ಮಾತನಾಡಿದ್ದಾರೆ.
ಶೃಂಗೇರಿ ಮಠದ ಆಸ್ತಿ ವಕ್ಫ್ ಆಸ್ತಿ ಎಂದು ಎಲ್ಲಿಯೂ ಹೇಳಿಲ್ಲ ಎಂದು ಹಜರತ್ ಟಿಪ್ಪು ಸುಲ್ತಾನ್ ವಂಶಸ್ಥ ಸಾಹೇಬ್ ದಾದಾ ಮನ್ಸೂರ್ ಅಲಿ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶೃಂಗೇರಿ ಮಠದ ಆಸ್ತಿ ಹಿಂದೂ ಧರ್ಮಕ್ಕೆ ಸೇರಿದ್ದು ಎಂಬ ಕಾರಣಕ್ಕಾಗಿ ಟಿಪ್ಪು ಸುಲ್ತಾನ್ ತಮ್ಮ ಸೇನೆಯ ಸಿಪಾಯಿಗಳನ್ನು ಕಳುಹಿಸಿ ಮಠದ ರಕ್ಷಣೆ ಮಾಡುವ ಕೆಲಸ ಮಾಡಿದ್ದರು. ಶೃಂಗೇರಿ ಮಠವನ್ನು ಕೆಲವರು ಒಡೆದು ಹಾಕಿದಾಗ ಟಿಪ್ಪು ಸುಲ್ತಾನ್ ಸಿಪಾಯಿಗಳನ್ನು ಕಳುಹಿಸಿ ರಕ್ಷಣೆ ಮಾಡಿದ್ದಲ್ಲದೆ, ಅದರ ಪುನರ್ರಚನೆ ಮಾಡಿಸಿದ್ದಾರೆ ಎಂದು ನುಡಿದರು.
ಕೇವಲ ಮುಸ್ಲಿಮರು ಮಾತ್ರವಲ್ಲ ದಲಿತರು ಸೇರಿದಂತೆ ಅನ್ಯ ಸಮುದಾಯಗಳಲ್ಲಿಯೂ ಟಿಪ್ಪು ಸುಲ್ತಾನ್ಗೆ ಅಭಿಮಾನಿಗಳಿದ್ದಾರೆ. ಹಾಗಾಗಿ, ಮುಂಬರುವ ದಿನಗಳಲ್ಲಿ ಸರ್ಕಾರವೇ ಟಿಪ್ಪು ಜಯಂತಿ ಆಚರಣೆ ಮಾಡಬೇಕು. ಒಂದು ವೇಳೆ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿಚಾರದಲ್ಲಿ ಸರ್ಕಾರ ತಕ್ಷಣ ಸಕಾರಾತ್ಮಕ ಕ್ರಮ ಕೈಗೊಳ್ಳದೇ ಹೋದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.