Friday, June 27, 2025

ಸಂಸ್ಕಾರ ಭಾರತೀ ವತಿಯಿಂದ ದೀಪಾವಳಿ ಕುಟುಂಬ ಮಿಲನ – ವಿವಿಧ ಸಂಘಟನೆಗಳಿಗೆ ಸಂಸ್ಕಾರ ಭಾರತೀ ಸೇವಾ ಪುರಸ್ಕಾರ

ಮಂಗಳೂರಿನ ಸಂಸ್ಕಾರ ಭಾರತೀ ವತಿಯಿಂದ ಕುಲಶೇಖರದ ಜ್ಯೋತಿ ನಗರದ ಶ್ರೀ ಧರ್ಮಶಾಸ್ತಾ ಮಂದಿರ ಟ್ರಸ್ಟ್ ಸಹಯೋಗದಲ್ಲಿ ಜ್ಯೋತಿ ನಗರದ ಶ್ರೀ ಧರ್ಮ ಶಾಸ್ತ ಮಂದಿರದ ಆವರಣದಲ್ಲಿ ದೀಪಾವಳಿ ಕುಟುಂಬ ಮಿಲನ ಕಾರ್ಯಕ್ರಮ ಜರಗಿತು.

ಪ್ರಧಾನ ಉಪನ್ಯಾಸ ನೀಡಿದ ಯುವ ಸಾಹಿತಿ ಭರತೇಶ್ ಶೆಟ್ಟಿ ಎಕ್ಕಾರ್ ಅವರು ಮಾತನಾಡಿ, ನಮ್ಮ ಹಿರಿಯರ ವಿಚಾರ ಧಾರೆ ಎಂದಿಗೂ ಅನುಕರಣೀಯವಾಗಿದೆ. ಋಣತ್ರಯಗಳಾದ ದೇವಋಣ, ಋಷಿಋಣ ಹಾಗೂ ಪಿತೃ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ನಮ್ಮ ಹಿರಿಯರು ಪ್ರಕೃತಿ ಆರಾಧಕರಾಗಿದ್ದರು. ಆದರೆ, ಪ್ರಸ್ತುತ ಹಣವೇ ಜೀವನವಾಗಿರುವುದು ದುರಂತವಾಗಿದೆ ಎಂದರು. ಪ್ರಸಕ್ತ ಕಾಲಘಟ್ಟದಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿರುವುದು ಅತ್ಯಂತ ದುರದೃಷ್ಟಕರ ಬೆಳವಣಿಗೆಯಾಗಿದೆ ಎಂದರು.

ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಅವರು ಮಾತನಾಡಿ, ಸಂಘ ಪರಿವಾರದ ಪರಿಕಲ್ಪನೆಯಾದ ಪಂಚ ಸಂಸ್ಕಾರದ ಆಶಯಗಳಿಗೆ ಸಂಸ್ಕಾರ ಭಾರತೀ ಸಂಘಟನೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.


ಶ್ರೀ ಧರ್ಮಶಾಸ್ತ ಮಂದಿರದ ಆಡಳಿತ ಟ್ರಸ್ಟಿ, ನ್ಯಾಯವಾದಿ ರಾಮಪ್ರಸಾದ್ ಎಸ್. ಅವರು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ತೊಕ್ಕೊಟ್ಟಿನ ಅಂಬಾವನ ಧರ್ಮ ಶಿಕ್ಷಣ ಕೇಂದ್ರ, ವಿಶ್ವ ಹಿಂದೂ ಪರಿಷತ್ ದೇರೆಬೈಲ್ ಕೊಂಚಾಡಿ ಖಂಡ ಸಮಿತಿ, ವಿಶ್ವ ಹಿಂದೂ ಪರಿಷತ್ ಭಜರಂಗ ದಳ, ಕೊಟ್ಟಾರ ಖಂಡ ಸಮಿತಿ ಹಾಗೂ ಬೋಳೂರಿನ ಅಕ್ಷಯ ಧರ್ಮ ಶಿಕ್ಷಣ ಕೇಂದ್ರ ಕ್ಕೆ ಸಂಸ್ಕಾರ ಭಾರತೀ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು .

ಸಂಸ್ಕಾರ ಭಾರತೀ ಇದರ ಅಧ್ಯಕ್ಷ ಪುರುಷೋತ್ತಮ ಭಂಡಾರಿ ಅಡ್ಯಾರ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್ ವಂದಿಸಿದರು. ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಯಾನಂದ ಕತ್ತಲ್ ಸಾರ್ ನೇತೃತ್ವದಲ್ಲಿ ‘ತುಳುವಾಲ ಬಲಿಯೇಂದ್ರೆ ’ ಯಕ್ಷಗಾನ ತಾಳಮದ್ದಳೆ ಜರಗಿತು. ಬಾಲಕೃಷ್ಣ ಕತ್ತಲ್ ಸಾರ್ ಅವರು ‘ಬಲೀಂದ್ರೆ ಲೆಪ್ಪು’ ಕಾರ್ಯಕ್ರಮ ನಿರ್ವಹಿಸಿದರು.

ಅಂಬಾವನ ಧರ್ಮಶಿಕ್ಷಣ ಕೇಂದ್ರ ತೊಕ್ಕೊಟ್ಟು ಉಳ್ಳಾಲ

2017, ಅಗಸ್ಟ್ ತಿಂಗಳ 9 ನೇ ತಾರೀಕಿನಂದು ಉಳ್ಳಾಲ ಗ್ರಾಮದ ತೊಕ್ಕೊಟ್ಟಿನ ಕೃಷ್ಣನಗರ ಎಂಬಲ್ಲಿ ಶ್ರೀ ನಾಗಕನ್ನಿಕಾ ರಕ್ತೇಶ್ವರಿ ದೈವಸ್ಥಾನದ ಪ್ರಾಂಗಣದಲ್ಲಿ 30 ವಿದ್ಯಾರ್ಥಿಗಳೊಂದಿಗೆ ಭಜನಾ ತರಬೇತಿ ಕಮ್ಮಟವಾಗಿ ಪ್ರಾರಂಭಗೊಂಡ ಅಂಬಾವನ ಧರ್ಮಶಿಕ್ಷಣ ಕೇಂದ್ರದಲ್ಲಿ ಇಂದು ವಿದ್ಯಾರ್ಥಿಗಳ ಒಟ್ಟು ಹಾಜರಾತಿ 470.‌ ಪ್ರತಿ ಆದಿತ್ಯವಾರ ಬೆಳಿಗ್ಗೆ ಗಂಟೆ 10.30 ರಿಂದ 11.30 ರ ವರೆಗೆ ಯಾವುದೇ ವಿಧದ ಶುಲ್ಕ ಪಡೆದುಕೊಳ್ಳದೆ ಉಚಿತವಾಗಿ ನಡೆಯುವುದಾದರೂ ಐಡಿ ಕಾರ್ಡ್, ಸಮವಸ್ತ್ರ, ತಾಳ, ನೋಟ್ಸ್, ಪಠ್ಯ ಪುಸ್ತಕ, ಸಿಲೆಬಸ್ ಮೊದಲಾದ ಶಾಲಾಶಿಸ್ತಿನಲ್ಲೇ ಬಹಳ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವಿದ್ಯಾರ್ಥಿಗೂ ಶ್ರೀಮದ್ ಭಗವದ್ಗೀತೆಯನ್ನು ಕಡ್ಡಾಯ ಪಠ್ಯವಾಗಿ ಕೇಂದ್ರವೇ ಉಚಿತವಾಗಿ ವಿತರಿಸಿದೆ. ಪ್ರತಿ ತಿಂಗಳ ಕೊನೆಯ ಆದಿತ್ಯವಾರ ಅತಿಥಿ ಶಿಕ್ಷಕರನ್ನು ಆಹ್ವಾನಿಸಿ ಯೋಗ, ಮಂತ್ರ, ಪರಿಸರ, ಸಾವಯವ, ತೋಟಗಾರಿಕೆ, ಮನಶಾಸ್ತ್ರ, ಮನೆ ನಿಭಾವಣೆ, ಸಂಸ್ಕಾರ, ಭಾಷಣ ಕಲೆ, ಸಂಗೀತ, ಪುರಾಣಜ್ಞಾನ ಮೊದಲಾದ ವಿಷಯಗಳ ಕುರಿತು ವಿಶೇಷ ತರಬೇತಿಯನ್ನೂ ನೀಡಲಾಗುತ್ತದೆ.


ಪಠಣ, ಮನನ, ಕೀರ್ತನ, ಶಾಸ್ತ್ರ ಎಂಬ ನಾಲ್ಕು ಪಠ್ಯಯೋಜನೆಯನ್ನು ರಚಿಸಿದ್ದು ತೊಕ್ಕೋಟ್ಟಿನ ಈ ಧರ್ಮ ಶಿಕ್ಷಣ ಕೇಂದ್ರದ ಪಠ್ಯವನ್ನೇ ಮೂರು ಧರ್ಮಶಿಕ್ಷಣ ಕೇಂದ್ರಗಳಲ್ಲಿ ಏಕರೂಪಪಠ್ಯವನ್ನಾಗಿ ಬೋಧಿಸಲಾಗುತ್ತಿದೆ. ಅಂಬಾವನ ಧರ್ಮಶಿಕ್ಷಣ ಕೇಂದ್ರದ ಮುಂದುವರಿಕೆಯಾಗಿ ಕಳೆದ ಐದು ವರ್ಷಗಳಿಂದ ಸೋಮೇಶ್ವರ ಗ್ರಾಮದ ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಧರ್ಮಶಿಕ್ಷಣ ಕೇಂದ್ರದಲ್ಲಿ 160 ವಿದ್ಯಾರ್ಥಿಗಳು, ಕಳೆದ ನಾಲ್ಕು ತಿಂಗಳುಗಳಿಂದ ಮಂಗಳೂರಿನ ಬೊಕ್ಕಪಟ್ನ ಅಕ್ಷಯ ಧರ್ಮಶಿಕ್ಷಣ ಕೇಂದ್ರದಲ್ಲಿ 100 ವಿದ್ಯಾರ್ಥಿಗಳು ಪ್ರತಿ ವಾರ ಧರ್ಮ ಶಿಕ್ಷಣ ತರಗತಿಯನ್ನು ಹಾಜರಾಗುತ್ತಿದ್ದಾರೆ. ಈ ಪ್ರಕಾರ ತೊಕ್ಕೊಟ್ಟಿನ ಅಂಬಾವನ ಧರ್ಮಶಿಕ್ಷಣ ಕೇಂದ್ರ ಪ್ರತಿವಾರವೂ 830 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ ಎಂಬುದು ನಮಗೆ ಸಂತೃಪ್ತಿ ತಂದಿರುವ ವಿಚಾರ. ಒಂದು ಸ್ವತಂತ್ರ ಶಾಲೆಯಾಗುವಷ್ಟು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಬಿಡದೆ ಏಳು ವರ್ಷಗಳು ನಡೆದುಕೊಂಡು ಬಂದಿರುವ ಉಭಯ ಜಿಲ್ಲೆಗಳ ಏಕೈಕ ಧರ್ಮ ಶಿಕ್ಷಣ ಸಂಸ್ಥೆಯೊಂದಿದ್ದರೆ ತೊಕ್ಕೋಟ್ಟಿನ ಅಂಬಾವನ ಧರ್ಮಶಿಕ್ಷಣ ಕೇಂದ್ರ.
2021 ರಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಏಕಕಾಲಕ್ಕೆ 180 ವಿದ್ಯಾರ್ಥಿಗಳ ಕುಣಿತ ಭಜನಾ ಪ್ರದರ್ಶನ ನೀಡಿದ ದಾಖಲೆ ಅಂಬಾವನ ಸಂಸ್ಥೆಗಿದೆ.
ಅಂಬಾವನ ಧರ್ಮಶಿಕ್ಷಣ ಕೇಂದ್ರದ ಮುಖ್ಯ ಶಿಕ್ಷಕರೂ ಪ್ರಧಾನ ಸಂಚಾಲಕರೂ ಆಗಿ ಡಾ. ಅರುಣ್ ಉಳ್ಳಾಲ್, ಸಂಯೋಜಕರಾಗಿ ಶ್ರೀ ದೇವದಾಸ್ ಉಳ್ಳಾಲ್, ಶ್ರೀ ಮಿಥಿನ್ ಕೃಷ್ಣನಗರ ಸಹಶಿಕ್ಷಕರಾಗಿ ಸರೋಜ ಧನಂಜಯ, ಪ್ರತಿಮಾ ಗೋಪಾಲಕೃಷ್ಣ, ಮೀನಾಕ್ಷಿ ರಮೇಶ್ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ.‌

Related Articles

Latest Articles