Saturday, June 28, 2025

ಭಾರೀ ಆತಂಕ ಸೃಷ್ಟಿಸಿದ ‘ರೆಮಲ್’ ಸೈಕ್ಲೋನ್ – ಹಲವು ರಾಜ್ಯಗಳಿಗೆ ಎಫೆಕ್ಟ್

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ರೆಮಲ್ ಚಂಡಮಾರುತ ಇಂದು ಪೂರ್ವ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ. ಪಶ್ಚಿಮ ಬಂಗಾಳ ಸೇರಿ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ. ರೆಮಲ್ ಸೈಕ್ಲೋನ್ ಕರುನಾಡಿನ ಮೇಲೂ ಎಫೆಕ್ಟ್​ ಬೀರಲಿದ್ದು, ವ್ಯಾಪಕ ಮಳೆಯ ಮುನ್ನೆಚ್ಚರಿಕೆ ಸಿಕ್ಕಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಸೃಷ್ಟಿಯಾದ ರೆಮಲ್ ಚಂಡಮಾರುತ ಬಂಗಾಳ, ಓಡಿಶಾ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಇಂದು ರಾತ್ರಿ ಕರಾವಳಿ ತೀರಕ್ಕೆ ಅಪ್ಪಳಿಸುವ ಎಚ್ಚರಿಕೆಯಿದೆ.

ಪಶ್ಚಿಮ ಬಂಗಾಳ ರಾಜಧಾನಿ ಕೊಲ್ಕತ್ತಾದಲ್ಲಿ ಈಗಾಗಲೇ ಸೈಕ್ಲೋನ್​ ಪರಿಣಾಮ ಶುರುವಾಗಿದೆ. ಪರಿಣಾಮ ನಗರದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಗಾಳಿ ವೇಗವೂ ಜಾಸ್ತಿಯಾಗಿದೆ. ಇಂದು ಸುಮಾರು 60 ರಿಂದ 70 ಕಿಲೋ ಮೀಟರ್​​ ವೇಗದಲ್ಲಿ ಕರಾವಳಿ ತೀರಕ್ಕೆ ಸೈಕ್ಲೋನ್ ಅಪ್ಪಳಿಸಲಿದೆ. ಈ ವೇಳೆ 100 ರಿಂದ 110 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಬಹುದೆಂದು ಅಂದಾಜಿಸಲಾಗಿದೆ. ಹೀಗಾಗಿ ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಡಿಶಾದ ಕರಾವಳಿ ಜಿಲ್ಲೆಗಳು, ಮಿಜೋರಾಂ, ತ್ರಿಪುರಾ ಹಾಗೂ ದಕ್ಷಿಣ ಮಣಿಪುರದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ಸಿಕ್ಕಿದೆ.

ರೆಮಲ್​​ ಚಂಡಮಾರುತದ ಪರಿಣಾಮ ದಕ್ಷಿಣದ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಇರಲಿದ್ದು, ಭಾರೀ ಮಳೆಯಾಗಲಿದೆ. ಇನ್ನು, ಈ ಸೈಕ್ಲೋನ್ ಎಫೆಕ್ಟ್​​​ ನಮ್ಮ ರಾಜ್ಯಕ್ಕೂ ತಟ್ಟಲಿದೆ ಅಂತಾ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬಳ್ಳಾರಿ, ಬೆಳಗಾವಿಯ ಸೇರಿ ಕೆಲ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೇ ರಾಜಧಾನಿ ಬೆಂಗಳೂರಿನಲ್ಲೂ ಮುಂದಿನ ಐದು ದಿನಗಳ ಕಾಲ ವರುಣನಬ್ಬರ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Related Articles

Latest Articles