ನಿಯತ್ತು ಅಂದರೆ ನಾಯಿ. ಅನ್ನ ಕೊಟ್ಟು ಸಾಕಿದ ಯಜಮಾನನಿಗೆ ಆಪತ್ತು ಬಂದರೆ ತಕ್ಷಣ ಶ್ವಾನಗಳು ಪ್ರಾಣ ತ್ಯಾಗ ಮಾಡಿದ ಅನೇಕ ಉದಾಹರಣೆಗಳು ಇವೆ. ಇದೀಗ ಹಾಸನ ತಾಲ್ಲೂಕಿನ, ಕಟ್ಟಾಯ ಗ್ರಾಮ ಇಂಥದ್ದೊಂದು ಘಟನೆಗೆ ಸಾಕ್ಷಿಯಾಗಿದೆ. ಪಿಟ್ಬುಲ್ ಶ್ವಾನವೊಂದು ಕಾಳಿಂಗ ಸರ್ಪದ ಜತೆ ರಣಭೀಕರ ಕಾಳಗ ನಡೆಸಿ ಉಸಿರು ಚೆಲ್ಲಿದೆ.
ಶಮಂತ್ ಎಂಬವರು ಪಿಟ್ಬುಲ್ ಹಾಗೂ ಡಾಬರ್ಮನ್ ನಾಯಿಗಳನ್ನು ತಮ್ಮ ತೋಟದಲ್ಲಿ ಸಾಕಿದ್ದರು. ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಳಿಂಗ ಸರ್ಪವೊಂದು ಮನೆಯ ಕಡೆಗೆ ಬಂದಿದೆ. ಈ ವೇಳೆ ಮಕ್ಕಳು ಮನೆಯ ಬಳಿ ಆಟವಾಡುತ್ತಿದ್ದರು. ಹಾವನ್ನು ಕಂಡ ಪಿಟ್ಬುಲ್ ಹಾಗೂ ಡಾಬರ್ಮನ್ ನಾಯಿಗಳು ಅದರ ಮೇಲೆ ದಾಳಿ ಮಾಡಿವೆ.
ತೆಂಗಿನ ಗರಿ ಕೆಳಗೆ ಇದ್ದ ಹಾವನ್ನು ಎಳೆದು ಹಾವಿನೊಂದಿಗೆ ಸೆಣಸಿವೆ. ಈ ವೇಳೆ ಪಿಟ್ಬುಲ್ ನಾಯಿಯ ಮುಖಕ್ಕೆ ಕಾಳಿಂಗ ಸರ್ಪ ಕಚ್ಚಿದೆ. ಹಾವಿನೊಂದಿಗೆ ಸುಮಾರು ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಸೆಣಸಾಡಿದ ಪಿಟ್ಬುಲ್ ನಾಯಿ, ಸುಮಾರು ಹತ್ತು ಅಡಿ ಸರ್ಪವನ್ನು ಹತ್ತು ಪೀಸ್ ಮಾಡಿ ಕೊಂದು ಹಾಕಿದೆ.
ಕಾಳಿಂಗವನ್ನು ಮಣಿಸಿದ ಬಳಿಕ ತಾನೂ ಪ್ರಾಣಬಿಟ್ಟಿದೆ. ಭೀಮಾ ಹೆಸರಿನ ಪಿಟ್ಬುಲ್ ಶ್ವಾನದ ನಿಧನದಿಂದ ಶಮಂತ್ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಈ ಶ್ವಾನ ಹಲವೆಡೆ ಡಾಗ್ ಶೋನಲ್ಲಿ ಬಹುಮಾನಗಳನ್ನೂ ಪಡೆದಿತ್ತು. ಶ್ವಾನಗಳು ಹಾಗೂ ಹಾವಿನ ನಡುವಿನ ಸೆಣಸಾಟ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ