Sunday, March 23, 2025

ದಕ್ಷಿಣ ಕನ್ನಡ: ಅತ್ಯಂತ ಅಪರೂಪದ ಸುಟ್ಟ ಆವಿಗೆ ಮಣ್ಣಿನ ಶಿಲ್ಪಗಳು ಪತ್ತೆ

ಇತಿಹಾಸ ಅನ್ನುವುದು ಎಂದೂ ಮುಗಿಯದ ಕೌತುಕ, ಸೋಜಿಗ.‌ ಮಾನಬ ಬಾಳಿ‌ ಬದುಕಿದ ರೀತಿಯೇ ಸೋಜಿಗ.‌ ಕಾಲ ಚಕ್ರದಲ್ಲಿ ಹುದುಗಿ ಹೋದ ಅದೆಷ್ಟೋ ಅಂಶಗಳು ಪತ್ತೆಯಾಗುತ್ತಲೇ ಇರುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆ ಸಮೀಪ ಇರುವ ಮೂಡುಕೊಣಾಜೆಯ ಬೃಹತ್ ಶಿಲಾಯುಗದ ನಿವೇಶನದಲ್ಲಿನ ಕಲ್ಮನೆ ಸಮಾಧಿಗಳ ಒಳಭಾಗದಲ್ಲಿ ಅತ್ಯಂತ ಅಪರೂಪದ ಸುಟ್ಟ ಆವಿಗೆ ಮಣ್ಣಿನ ಶಿಲ್ಪಗಳು ಪತ್ತೆಯಾಗಿವೆ.

ತುಳುನಾಡಿನ ಮಾತೃಮೂಲೀಯ ಸಾಮಾಜಿಕ ವ್ಯವಸ್ಥೆಯ ಹಾಗೂ ದೈವಾರಾಧನೆಯ ಪ್ರಾಚೀನತೆಯ ಅತ್ಯಂತ ವಿಶ್ವಾಸಾರ್ಹ ದಾಖಲೆಗಳು ಎಂದು ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರೊ. ಟಿ. ಮುರುಗೇಶಿ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಇದೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ, ಬೃಹತ್ ಶಿಲಾಯುಗದ ಸಮಾಧಿಯ ಒಳಗೆ ಕಾಮಧೇನು ಅಥವಾ ಮಾತೃದೇವತೆಯ ಎರಡು ಶಿಲ್ಪಗಳು ಪತ್ತೆಯಾಗಿವೆ. ಕೈಯಿಂದ ತಯಾರಿಸಿದ ಈ ಶಿಲ್ಪಗಳು, ಮಾನವ ದೇಹ ಮತ್ತು ನಂದಿಯ ಮುಖವನ್ನು ಹೊಂದಿವೆ. ಅವುಗಳ ಸ್ತ್ರೀತ್ವದ ಸಂಕೇತವಾಗಿ ಎರಡು ಮೊಲೆಗಳನ್ನು ಅಂಟಿಸಲಾಗಿದೆ. ಇಂತಹ ಏಕೈಕ ಶಿಲ್ಪ ಕೇರಳದ ಮಲಪ್ಪುರದ ಬೃಹತ್ ಶಿಲಾಯುಗದ ಕುಂಭ ಸಮಾಧಿಯಲ್ಲಿ ದೊರೆತಿದೆ. ಇದರ ಹೊರತು ಭಾರತದ ಯಾವುದೇ ನಿವೇಶನದಲ್ಲಿ ಇಂತಹ ಶಿಲ್ಪಗಳು ಪತ್ತೆಯಾಗಿಲ್ಲ. ಆದರೆ, ಇಂತಹ ಶಿಲ್ಪಗಳು ಈಜಿಪ್ಟ್ ನಲ್ಲಿ ವ್ಯಾಪಕವಾಗಿ ಕಂಡು ಬಂದಿವೆ ಎಂದು ಅವರು ತಿಳಿಸಿದ್ದಾರೆ.

ಈ ಶಿಲ್ಪಗಳ ಜೊತೆಯಲ್ಲಿ ಒಂದು ಮಾತೃದೇವತೆಯ ಶಿಲ್ಪ, ಎರಡು ನವಿಲಿನ ಶಿಲ್ಪಗಳು, ಒಂದು ಮಾತೃ ದೇವತೆಯ ಕೈಯ ಭಾಗ ಹಾಗೂ ಒಂದು ಕುದುರೆ ಮತ್ತು ಒಂದು ಖಚಿತವಾಗಿ ಗುರುತಿಸಲಾಗದ ವಸ್ತು ಕಂಡು ಬಂದಿದೆ. ಇವುಗಳ ಜೊತೆಯಲ್ಲಿ ಕಬ್ಬಿಣದ ತುಣುಕುಗಳು ಮತ್ತು ಎಲುಬಿನ ಚೂರುಗಳು ಪತ್ತೆಯಾಗಿವೆ. ಕೇರಳ ಮತ್ತು ಕರ್ನಾಟಕದ ಕರಾವಳಿಯಲ್ಲಿ ದೊರೆತಿರುವ ಈ ಶಿಲ್ಪಗಳು ಕರ್ನಾಟಕ ಮತ್ತು ಕೇರಳದಲ್ಲಿನ ಮಾತೃಮೂಲೀಯ ಸಂಸ್ಕೃತಿಯ ಪ್ರಬಲ ಸಾಕ್ಷಿಗಳಾಗಿವೆ. ಈ ಶಿಲ್ಪ ಲಕ್ಷಣಗಳು ಇಲ್ಲಿನ ದೈವಾರಾಧನೆಯ ಶಿಲ್ಪಗಳ ಅತ್ಯಂತ ಪ್ರಾಚೀನ ಪುರಾವೆಗಳಾಗಿವೆ. ಈ ಶಿಲ್ಪಗಳ ಕಾಲಮಾನವನ್ನು ಕನಿಷ್ಠ ಕ್ರಿಪೂ 800 ಅಥವಾ 700 ಎಂದು ನಿರ್ಧರಿಸಬಹುದಾಗಿದ್ದು, ಇದು ಇಲ್ಲಿನ ದೈವಾರಾಧನೆಯ ಪ್ರಾಚೀನತೆಗೂ ಸಾಕ್ಷಿಯಾಗಿದೆ.

ಈ ಮಹತ್ತರ ಸಂಶೋಧನೆಯಲ್ಲಿ ಪ್ರೊ. ಟಿ. ಮುರುಗೇಶಿಯವರ ಜೊತೆಯಲ್ಲಿ ಶ್ರೇಯಸ್ ಮಣಿಪಾಲ್, ಗೌತಮ್ ಬೆಳ್ಮಣ್, ಶ್ರೇಯಸ್ ಬಂಟಕಲ್, ರವೀಂದ್ರ ಕುಶ್ವಾ, ಕಾರ್ತೀಕ್, ಕು.ಅಕ್ಷತಾ ಮತ್ತು ಪ್ರಜ್ಞಾ ಭಾಗಿಯಾಗಿದ್ದರು.

Related Articles

Latest Articles