ಕಾರ್ಕಳ: ನಕ್ಸಲ್ ಮುಖಂಡ ವಿಕ್ರಂ ಗೌಡ ಅವರು ಪೊಲೀಸರ ಗುಂಡಿಗೆ ಹತನಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಸಾಕಷ್ಟು ನಿಲುವುಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ವಿರೋಧವೂ ಕೇಳಿಬರುತ್ತಿದೆ. ನಕ್ಸಲರನ್ನು ಯಾಕಾಗಿ ಹತ್ಯೆ ಮಾಡಲಾಯಿತು. ಅವರ ಕ್ರಿಮಿನಲ್ ಹಿನ್ನಲೆಯೇನು? ಎನ್ಕೌಂಟರ್ ಒಂದೇ ದಾರಿಯೇ? ಎಂಬ ಪ್ರಶ್ನೆಗಳು ಉದ್ಭವಿಸಿದೆ.
ಈ ಬಗ್ಗೆ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ರಾಜ್ಯಮಟ್ಟದ ಸಮಿತಿಯ ಸದಸ್ಯ ಬಂಜಗೆರೆ ಜಯಪ್ರಕಾಶ್ ಮಾತನಾಡಿದ್ದಾರೆ. ಇದನ್ನೊಂದು ಹತ್ಯೆ ಎಂದೇ ನಾವು ಕರೆಯುತ್ತೇವೆ. ಪೊಲೀಸರು ಹೇಳಿಕೆಯನ್ನು ಆಧರಿಸಿ ಇದನ್ನು ಎನ್ಕೌಂಟರ್ ಎಂದು ಒಪ್ಪಿಕೊಳ್ಳಲು ನಾವು ತಯಾರಿಲ್ಲ. ಸಮಿತಿಯಲ್ಲಿರುವ ನಾಗರಿಕ ಸಮಾಜದ ಪ್ರತಿನಿಧಿಗಳು ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಈ ಹತ್ಯೆ ಬಗ್ಗೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಚಳವಳಿಯಲ್ಲಿ ತೊಡಗಿರುವವರು ಇತರ ಅಪರಾಧಿಗಳಂತಲ್ಲ. ಇವರನ್ನು ರಾಜಕೀಯ ಹೋರಾಟಗಾರರು ಎಂದೇ ಪರಿಗಣಿಸಬೇಕಾಗುತ್ತದೆ. ಆದರೆ ಹೋರಾಟಕ್ಕೆ ಅವರು ಆಯ್ಕೆ ಮಾಡಿಕೊಂಡ ಹಾದಿ ಒಪ್ಪತಕ್ಕದ್ದಲ್ಲ. ಹಾಗೆಂದು ಅವರನ್ನು ಈ ರೀತಿ ಕೊಲ್ಲುವ ಕ್ರಮ ಸರಿಯಲ್ಲ. ಸರ್ಕಾರ ತಕ್ಷಣವೇ ಇಂತಹ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕು ಎಂದಿದ್ದಾರೆ.
ಶರಣಾಗಿ ಎಂದು ವಿಕ್ರಂ ಗೌಡ ಮತ್ತು ತಂಡವನ್ನು ಉದ್ದೇಶಿಸಿ ಹಲವು ತಿಂಗಳ ಹಿಂದೆಯೇ ಸಮಿತಿಯಿಂದ ಪತ್ರ ಬರೆದಿದ್ದೆವು. ಅವರು ಯಾರೂ ನಮ್ಮನ್ನು ಸಂಪರ್ಕಿಸಲಿಲ್ಲ. ನಮ್ಮ ಪತ್ರಗಳು ಅವರಿಗೆ ತಲುಪಿದೆ ಎಂಬುದರ ಬಗ್ಗೆಯೇ ನಮಗೆ ಅನುಮಾನವಿದೆ ಎಂದು ಹೇಳಿದ್ದಾರೆ.
ನಿಮ್ಮ ಹೋರಾಟ ಮತ್ತು ಬೇಡಿಕೆಗಳ ಬಗ್ಗೆ ನಮಗೆ ಸಹಾನುಭೂತಿ ಇದೆ. ಆದರೆ ಸಶಸ್ತ್ರ ಹೋರಾಟ ಸಂವಿಧಾನ ಬಾಹಿರ. ಅದನ್ನು ಬಿಟ್ಟು, ಶರಣಾಗಿ, ನಿಮಗೆ ತೊಂದರೆಯಾಗದಂತೆ ನಾವು ಎಚ್ಚರಿಕೆ ವಹಿಸುತ್ತೇವೆ. ಸಮಾಜದ ಮುಖ್ಯವಾಹಿನಿಗೆ ಬಂದು ಎಲ್ಲರಂತೆ ನಿಮ್ಮ ಹೋರಾಟ ಮುಂದುವರೆಸಿ ಎಂದು ಅಲ್ಲಿ ಉಳಿದಿರುವವರಿಗೆ ತಿಳಿ ಹೇಳುತ್ತೇನೆ ಎಂದು ಅವರು ತಿಳಿಸಿದ್ದಾರೆ.