ಮಂಗಳೂರು: ವ್ಯಕ್ತಿಯೊಬ್ಬರ ಮೊಬೈಲ್ ಹ್ಯಾಕ್ ಮಾಡಿ ಅವರ ಹೆಸರಿನಲ್ಲೇ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಆರ್ಡರ್ ಮಾಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಸ್ಕ್ಯಾಮ್ನ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸುದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ದೆಹಲಿಯಿಂದ ಆರೋಪಿಯ ಹೆಡೆಮುರಿಕಟ್ಟಿ ಜೈಲಿಗಟ್ಟಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಈ ಕಾರ್ಯಚರಣೆ ನಡೆದಿದ್ದು ಬಲು ರೋಚಕ.
ಪೊಲೀಸರ ಹೆಸರಿನಲ್ಲಿ ಎಪಿಕೆ ಕಳುಹಿಸಿದ ಖದೀಮ
ಮಂಗಳೂರಿನ ಯದುನಂದನ್ ಆಚಾರ್ಯ ಎಂಬವರಿಗೂ ಸೈಬರ್ ಖದೀಮರು ಬೆಂಗಳೂರು ಸಿಟಿ ಪೊಲೀಸರ ಹೆಸರಿನಲ್ಲಿ ನಿಮ್ಮ ವಾಹನದ ದಂಡ ಪಾವತಿ ಬಾಕಿ ಇದೆ ಎಂಬ ಮೆಸೇಜ್ ಕಳುಹಿಸಿದ್ದಾರೆ. ಈ ದಂಡ ಪಾವತಿಗೆ ವಾಹನ್ ಪರಿವಾಹನ್ ಎಂಬ ಸಾರಿಗೆ ಇಲಾಖೆಯ ಆ್ಯಪ್ನ ಎಪಿಕೆ ಫೈಲ್ ಸಹ ಕಳುಹಿಸಿಕೊಟ್ಟಿದ್ದಾರೆ. ಇದನ್ನು ಇನ್ಸ್ಟಾಲ್ ಮಾಡಿ ದಂಡ ಪಾವತಿಸುವಂತೆಯೂ ಮೇಸೆಜ್ನಲ್ಲಿ ತಿಳಿಸಲಾಗಿತ್ತು. ಇದನ್ನು ನಂಬಿ ದಂಡ ಪಾವತಿಸಲು ಮುಂದಾಗಿದ್ದಾರೆ.
ಅದರಂತೆ ಯದುನಂದನ್ ಎಪಿಕೆ ಫೈಲ್ ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿದ್ದಾರೆ. ಇನ್ಸ್ಟಾಲ್ ಮಾಡುತ್ತಿದ್ದಂತೆ ಅವರ ಮೊಬೈಲ್ ಸಂಪೂರ್ಣವಾಗಿ ಸೈಬರ್ ವಂಚಕರ ನಿಯಂತ್ರಣಕ್ಕೆ ಹೋಗಿದೆ. ಕೂಡಲೇ ಅವರ ಪ್ಲಿಪ್ಕಾರ್ಟ್ ಖಾತೆ ಹ್ಯಾಕ್ ಆಗಿದೆ. ಸೈಬರ್ ವಂಚಕರು ಅವರ ಪ್ಲಿಪ್ಕಾರ್ಟ್ ಖಾತೆ ಬಳಸಿಕೊಂಡು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳಿಂದ 1.31 ಲಕ್ಷ ರೂ. ಮೌಲ್ಯದ ಎರಡು ಮೊಬೈಲ್ ಪೋನ್, 1 ಇಯರ್ಪಾಡ್ ಮತ್ತು ಗಿಫ್ಟ್ ವೋಚರ್ಗಳನ್ನು ಖರೀದಿಸಿದ್ದಾರೆ.

ಘಟನೆ ನಡೆದ ಮರುದಿನ ತನ್ನ ಮೊಬೈಲ್ ಹ್ಯಾಕ್ ಆಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ಯದುನಂದನ್ ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಫ್ಲಿಪ್ ಕಾರ್ಟ್ ಕಂಪೆನಿಯನ್ನು ಸಂಪರ್ಕಿಸಿ ಇಯರ್ ಪಾಡ್ ಹಾಗೂ 50 ಸಾವಿರ ಮೌಲ್ಯದ ಗಿಫ್ಟ್ ವೋಚರ್ ಡೆಲಿವರಿಯನ್ನು ತಡೆಹಿಡಿದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಎರಡು ಮೊಬೈಲ್ ಫೋನ್ ಡೆಲಿವರಿ ಆಗಿತ್ತು. ಆದರೆ, ಈ ವಿಳಾಸವನ್ನು ಬೆನ್ನತ್ತಿದ್ದಾಗ ದೆಹಲಿ ವಿಳಾಸ ಎಂದು ಗೊತ್ತಾಗಿದೆ.
ಕೂಡಲೇ ವಿಮಾನವೇರಿದ ಮಂಗಳೂರು ಪೊಲೀಸರು ದೆಹಲಿಗೆ ತೆರಳಿ ಡೆಲಿವರಿ ಏಜೆಂಟ್ ವೇಷದಲ್ಲಿ ವಂಚಕನಿದ್ದ ಫ್ಲ್ಯಾಟ್ಗೆ ಹೋಗಿದ್ದಾರೆ. ಉಳಿದ ವಸ್ತುಗಳನ್ನು ರಿಸೀವ್ ಮಾಡಿಕೊಳ್ಳಲು ಆರೋಪಿ ಬರುತ್ತಿದ್ದಂತೆ ಪೊಲೀಸರು ಲಾಕ್ ಮಾಡಿದ್ದಾರೆ. ಈ ಬಂಧಿತ ಆರೋಪಿಯನ್ನು ಗೌರವ್ ಮಕ್ವಾನ್ ಎಂದು ಗುರುತಿಸಲಾಗಿದೆ.
ಆರೋಪಿಯಯಿಂದ ಐದು ಐಫೋನ್-15, ಎರಡು ಆಂಡ್ರಾಯ್ಡ ಫೋನ್, ಎರಡು ಇಯರ್ಪಾಡ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ ಸೇರಿದಂತೆ 4 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಕಲಿ ಆ್ಯಪ್ ಕಳುಹಿಸಿ ಹ್ಯಾಕ್ ಮಾಡುವುದು ಒಬ್ಬನಾದರೇ, ಡೆಲಿವರಿಯನ್ನು ಸ್ವೀಕರಿಸುವವರು ಇನ್ನೊಬ್ಬರಾಗಿದ್ದರು. ಸದ್ಯ ಈ ವಂಚನೆ ಜಾಲ ಮಂಗಳೂರು ಪೊಲೀಸರ ಚಾಣಕ್ಷತನದಿಂದ 48 ಗಂಟೆಯಲ್ಲಿ ಬಯಲಿಗೆ ಬಂದಿದೆ.