ಮಂಗಳೂರು: ಮನೆಯಲ್ಲಿ ಹಗಲು ವೇಳೆ ಒಂಟಿಯಾಗಿದ್ದ ಬಾಲಕಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ ಘಟನೆ ನಡೆದಿದ್ದು ಜನರನ್ನು ಬೆಚ್ಚಿಬೀಳಿಸಿದೆ. ಪಣಂಬೂರು ಪೋಲಿಸ್ ಠಾಣಾ ವ್ಯಾಪ್ತಿಯ ಜೋಕಟ್ಟೆಯಲ್ಲಿ ಬಾಲಕಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪಣಂಬೂರು ಠಾಣೆಯಲ್ಲಿ ಅ.ಕ್ರ. ನಂಬ್ರ 87/2024 ಕಲಂ 103 ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ದಿನೇಶ್ ಕುಮಾರ್ ಮಾನ್ಯ ಉಪ ಪೊಲೀಸ್ ಆಯುಕ್ತರು ಅಪರಾಧ ಮತ್ತು ಸಂಚಾರ, ಉತ್ತರ ಉಪ ವಿಭಾಗದ ಅಧಿಕಾರಿಗಳು ಮತ್ತು ಪಣಂಬೂರು ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಘಟನೆಯ ವಿವರ :
ಜೋಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ಬೆಳಗಾವಿ ಮೂಲದ ಹನುಮಂತ ಎಂಬವರು ವಾಸವಾಗಿದ್ದು ಅವರ ಮನೆಯಲ್ಲಿ ಕಳೆದ 04 ದಿನಗಳ ಹಿಂದೆ ತಮ್ಮನ ಮಗಳಾದ 13 ವರ್ಷದ ಬಾಲಕಿಯು ಕೈ ನೋವಿನ ಚಿಕಿತ್ಸೆ ಪಡೆಯಲು ಬೆಳಗಾವಿಯಿಂದ ಬಂದು ಉಳಿದುಕೊಂಡಿದ್ದಳು.
ಆ. 6 ಬೆಳಗ್ಗೆ ಜೋಕಟ್ಟೆಯ ಬಾಡಿಗೆ ಮನೆಯಿಂದ ಮನೆಯಲ್ಲಿರುವವರೆಲ್ಲರು ಕೆಲಸಕ್ಕೆ ಹೋದ ನಂತರ ಸಮಯ ಸುಮಾರು 10.30 ಗಂಟೆಗೆ ಅಪ್ರಾಪ್ತ ಮೃತ ಬಾಲಕಿಯ ತಾಯಿಯು ಪಕ್ಕದ ಮನೆಯವರಿಗೆ ಕರೆ ಮಾಡಿ ಬಾಲಕಿಗೆ ಪೋನ್ ಕೊಡಲು ತಿಳಿಸಿದಾಗ ಪಕ್ಕದ ಮನೆಯವರು ಪೋನ್ ಕೊಡಲು ಬಾಲಕಿಯು ವಾಸವಿದ್ದ ಬಾಡಿಗೆ ಮನೆಗೆ ಬಂದಾಗ ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಯಾರೋ ಕೊಲೆ ಮಾಡಿದ ರೀತಿ ಕಂಡುಬಂದಿರುತ್ತದೆ ಎಂದು ಪಕ್ಕದ ಮನೆಯವರು ತಾಯಿಗೆ ಪೋನಿನಲ್ಲಿ ತಿಳಿಸಿದ್ದಾರೆ.
ಕೂಡಲೇ ಮೃತ ಬಾಲಕಿಯ ತಾಯಿಯು ಹನುಮಂತನಿಗೆ ಪೋನ್ ಮೂಲಕ ಬಾಡಿಗೆ ಮನೆಗೆ ಹೋಗುವಂತೆ ತಿಳಿಸಿದ್ದು, ಹನುಮಂತ ಬಾಡಿಗೆ ಮನೆಗೆ ಬಂದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.