Saturday, May 24, 2025

ಕಾಸರಗೋಡು: ಹಿಟಾಚಿ ಮಗುಚಿಬಿದ್ದು ಯುವಕ ಮೃತ್ಯು

ಕಾಸರಗೋಡು: ಹಿಟಾಚಿ ಮಗುಚಿಬಿದ್ದ ಪರಿಣಾಮ ಚಾಲಕ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ. ಮಹಿಳಾ ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷೆಯ ಪುತ್ರ ಅಸುನೀಗಿದ್ದಾರೆ. ಬಂದಡ್ಕ ಕುಟ್ಟಿಕೋಳ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದಾಗಿ ಮನೋರಮಾ ಸುದ್ದಿ ವಾಹಿನಿ ವರದಿ ಪ್ರಕಟಿಸಿದೆ.

ಮಹಿಳಾ ಕಾಂಗ್ರೆಸ್ ನೇತಾರೆ ಮಿನಿಚಂದ್ರನ್ ಎಂಬವರ ಪುತ್ರ ಪ್ರೀತಂ ಲಾಲ್‌ ಚಂದ್ (22) ಮೃತಪಟ್ಟ ದುರ್ದೈವಿ. ಇಂದು ಬೆಳಿಗ್ಗೆ 9:30ರ ಸುಮಾರಿಗೆ ದಾರುಣ ಅಪಘಾತ ಸಂಭವಿಸಿದೆ. ಹಿಟಾಚಿಯನ್ನು ತೊಳೆಯಲೆಂದು ತೆಗೆದುಕೊಂಡು ಹೋಗುತ್ತಿದ್ದಾಗ ವಾಹನ ಮುಂಭಾಗ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಗುಚಿ ಬಿದ್ದಿದೆ.

ಅಪಾಯದಿಂದ ಪಾರಾಗಲು ಪ್ರಯತ್ನಿಸಿದರೂ ಸಾಧ್ಯವಾಗದೆ ಪ್ರೀತಂಲಾಲ್ ಚಂದ್ ಯಂತ್ರದಡಿ ಸಿಲುಕಿಕೊಂಡಿದ್ದರು. ಕುತ್ತಿಕೋಲ್ ನಿಂದ ಅಗ್ನಿಶಾಮಕ ದಳ ರಕ್ಷಣಾ ಕಾರ್ಯಕ್ಕಾಗಿ ತಲುಪಿತ್ತು. ಆದರೆ ಅದರ ಮೊದಲೇ ನಾಗರಿಕರು ಯುವಕನನ್ನು ಹಿಟಾಚಿಯಡಿಯಿಂದ ಹೊರತೆಗೆದು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಘಟನೆ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತರು ವಿದ್ಯಾಭ್ಯಾಸದ ಜೊತೆಗೆ ಹಿಟಾಚಿ ಕೆಲಸ ಮಾಡುತ್ತಿದ್ದರು. ಮೃತರು ತಾಯಿ, ಸಹೋದರ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Related Articles

Latest Articles