ಮಡಿಕೇರಿ: ಮದುವೆ ಹಿಂದಿನ ದಿನ ಸಿಹಿತಿಂಡಿ ನೀಡಿಲ್ಲ ಎಂಬ ಕಾರಣಕ್ಕೆ ಮದುವೆಯನ್ನೇ ರದ್ದುಗೊಳಿಸಿದ ಘಟನೆ ಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ನಡೆದಿದೆ.
ಸಮೀಪದ ಹಾನಗಲ್ಲು ಗ್ರಾಮದ ಸಿದ್ಧಾರ್ಥ ಬಡಾವಣೆಯ ಯುವತಿಯ ವಿವಾಹ ತುಮಕೂರು ಜಿಲ್ಲೆಯ ಯುವಕನೋರ್ವನೊಂದಿಗೆ ನಿಶ್ಚಯವಾಗಿದ್ದು, ಮೇ 5ರಂದು ಮಡಿಕೇರಿಯ ಜಾನಕಿ ಕನ್ವೆನ್ಶನ್ ಹಾಲ್ನಲ್ಲಿ ವಿವಾಹ ಏರ್ಪಡಿಸಲಾಗಿತ್ತು.
ಶನಿವಾರ ಸಂಜೆ ತುಮಕೂರಿನಿಂದ ವರನ ಕಡೆಯವರು ಮಂಟಪಕ್ಕೆ ಆಗಮಿಸಿದ್ದು, ರಾತ್ರಿಯ ಊಟದಲ್ಲಿ ಸಿಹಿತಿಂಡಿ ಇಲ್ಲ ಎಂಬ ಕಾರಣಕ್ಕೆ ತಗಾದೆ ತೆಗೆದು ಗಲಾಟೆ ಆರಂಭಿಸಿದ್ದಾರೆ. ಮಂಟಪದಲ್ಲಿಯೇ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆದಿದೆ.
ರವಿವಾರ ಬೆಳಗ್ಗೆ ಅಂತಿಮವಾಗಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಶನಿವಾರ ರಾತ್ರಿ ಮದುವೆಯೇ ಬೇಡ ಎಂದು ಉಂಗುರ ಕಳಚಿಕೊಟ್ಟಿದ್ದ ವರ ರವಿವಾರ ಬೆಳಗ್ಗೆ ನಾನು ಮದುವೆಯಾಗುತ್ತೇನೆ ಎಂದು ಹೊಸ ವರಸೆ ಆರಂಭಿಸಿದ್ದ. ಆದರೆ ದಿಢೀರ್ ಘಟನಾವಳಿಯಿಂದ ಬೇಸತ್ತ ವಧು ಮದುವೆಯೇ ಬೇಡ ಎಂದು ಪೊಲೀಸರೆದುರು ಹೇಳಿಕೆ ಕೊಟ್ಟಿದ್ದಾಳೆ.
ಮದುವೆಗೆಂದು ಖರ್ಚು ಮಾಡಿರುವ ಹಣವನ್ನು ವರನ ಕಡೆಯವರು ನೀಡಬೇಕೆಂದು ವಧುವಿನ ಕಡೆಯವರು ಠಾಣೆ ಎದುರು ಆಗ್ರಹಿಸಿದರು. ಅಂತಿಮವಾಗಿ ಹಣಕಾಸಿನ ವಿಚಾರವನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿ ಪೊಲೀಸರು ಪ್ರಕರಣಕ್ಕೆ ಇತಿಶ್ರೀ ಹಾಡಿದರು.