Friday, June 27, 2025

ಕುಂದಾಪುರ: ಭೀಕರ ಅಪಘಾತದಲ್ಲಿ ಕಾರ್ ರೇಸ್ ಚಾಂಪಿಯನ್ ಮೃತ್ಯು

ಕುಂದಾಪುರ: ಗ್ಯಾಸ್ ಸಿಲಿಂಡರ್ ಸಾಗಾಟದ ಟಾಟಾ ಏಸ್ ವಾಹನಕ್ಕೆ ಹಿಂದಿನಿಂದ ಬೈಕ್ ಢಿಕ್ಕಿಯಾಗಿ ಕಾರು ರೇಸ್ ಚಾಂಪಿಯನ್ ಅಸುನೀಗಿದ ಘಟನೆ ವರದಿಯಾಗಿದೆ. ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಸೇತುವೆ ಬಳಿ ಅಪಘಾತ ಸಂಭವಿಸಿದೆ. ಕಾರು ರೇಸ್ ಚಾಂಪಿಯನ್ ರಂಜಿತ್ ಬಲ್ಲಾಳ್ (59) ಸ್ಥಳದಲ್ಲೇ ಸಾವನ್ನಪ್ಪಿದವರು.

ರಂಜಿತ್ ಬಲ್ಲಾಳ್ ಮಂಗಳೂರು ಮೂಲದ ಕೆ.ಬಿ. ಯುವರಾಜ ಬಲ್ಲಾಳ್ ಅವರ ಪುತ್ರ. ಇವರು ಕುಟುಂಬಸ್ಥರೊಂದಿಗೆ 3 ದಿನಗಳ ಹಿಂದೆ ಗೋವಾಗೆ ಪ್ರವಾಸಕ್ಕೆ ತೆರಳಿದ್ದರು. ರಂಜಿತ್ ಅವರು ಬೈಕ್‌ನಲ್ಲಿ ಬರುತ್ತಿದ್ದರೆ, ಹಿಂದಿನಿಂದ ಮನೆಯವರೆಲ್ಲ ಕಾರಿನಲ್ಲಿ ಬರುತ್ತಿದ್ದರು.

ಅರಾಟೆ ಸೇತುವೆಗಿಂತ ತುಸು ಹಿಂದೆ ಒಂದು ಸೇತುವೆಯಲ್ಲಿ ಸಂಚಾರ ನಿಷೇಧಿಸಿದ್ದರಿಂದ ಡೈವರ್ಶನ್ ನೀಡಿದ್ದು, ಅಲ್ಲಿ ಟಾಟಾ ಏಸ್ ಚಾಲಕ ಏಕಾಏಕಿ ವಾಹನವನ್ನು ನಿಧಾನ ಮಾಡಿದ್ದಾನೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಬೈಕ್ ಟಾಟಾ ಏಸ್ ವಾಹನಕ್ಕೆ ಢಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ರಂಜಿತ್ ಬಲ್ಲಾಳ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಂಜಿತ್ ಕಾರು ರ‍್ಯಾಲಿಯಲ್ಲಿ ನ್ಯಾಶನಲ್ ಚಾಂಪಿಯನ್ ಆಗಿದ್ದು, ಪ್ರತಿಭಾವಂತರಾಗಿದ್ದ ಅವರು ನೂರಕ್ಕೂ ಹೆಚ್ಚು ಟ್ರೋಫಿಗಳನ್ನು ಗೆದ್ದಿದ್ದರು. ಆಟೋ ಕ್ರಾಸ್ ಹಿಲ್ ಕ್ಲೈಂಬ್‌ನಲ್ಲಿ ಅತ್ಯಂತ ವೇಗದ ಡ್ರೈವರ್ ಆಗಿದ್ದರು. ಇನ್ನು ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿದ್ದ ರಂಜಿತ್ ಹಲವಾರು ಮಂದಿಗೆ ತರಬೇತಿ ನೀಡಿದ್ದು, ಅವರಲ್ಲಿ ಕೆಲವರು ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿದ್ದರು.

ಇದಲ್ಲದೆ ಬ್ಯಾಡ್ಮಿಂಟನ್, ಕ್ರಿಕೆಟ್ ಮತ್ತು ಸ್ನೂಕರ್ ಆಟಗಾರ ರಾಗಿಯೂ ಗಮನ ಸೆಳೆದಿದ್ದರು. ಪ್ರತಿಷ್ಠಿತ ಕಂಪೆನಿಗಳಿಗೆ ಲೇಹ್, ಲಡಾಖ್, ಉತ್ತರಾ ಖಂಡ ಸಹಿತ ದೇಶಾದ್ಯಂತ ಸ್ಪರ್ಧಾಕೂಟಗಳನ್ನು ಸಂಘಟಿಸಿದ್ದರು. ಬೆಂಗಳೂರಿನಲ್ಲಿ ತಮ್ಮ ಸ್ವಂತ ಆರ್‌ಎಸಿ ಕಂಪೆನಿ ಮೂಲಕ ಉತ್ತಮ ಟ್ಯೂನರ್ ಆಗಿಯೂ ಹೆಸರು ಗಳಿಸಿದ್ದರು.

Related Articles

Latest Articles