ಬೆಂಗಳೂರು: ‘ಯಾವುದೋ ಹಳೆಯ ಪ್ರಕರಣವನ್ನು ಕೆದಕಿ ನನ್ನನ್ನು ಬ್ಲಾಕ್ಮೇಲ್ ಮಾಡುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಇದೇ ವೇಳೆ ಯಾರೋ ಒಬ್ಬರು ಸಿದ್ದರಾಮಯ್ಯ ರಕ್ಷಣೆಗೆ ಬಂಡೆಯಂತೆ ನಿಲ್ಲುವೆ ಎಂದಿದ್ದು, ಬಂಡೆಯಿಂದಲೇ ಅವರಿಗೆ ಅಪಾಯ ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.
ಕುಮಾರಸ್ವಾಮಿ ವಿರುದ್ಧದ ಪ್ರಕರಣದಲ್ಲಿ ರಾಜ್ಯಪಾಲರು ತನಿಖೆಗೆ ಈವರೆಗೆ ಅನುಮತಿ ಏಕೆ ನೀಡಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸುಪ್ರೀಂ ಕೋರ್ಟ್ನಲ್ಲಿರುವ ಪ್ರಕರಣವನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ರಾಜ್ಯಪಾಲರಿಗೂ ಅವಮಾನ ಮಾಡುತ್ತಿದೆ. ಜಂತಕಲ್ ಗಣಿ ಪ್ರಕರಣವು ಹೈಕೋರ್ಟ್ನಲ್ಲಿ ವಜಾ ಆಗಿದೆ. ಸಾಯಿ ವೆಂಕಟೇಶ್ವರ ಹಗರಣದಲ್ಲಿ ತನಿಖೆ ನಡೆಯಬೇಕಿದೆ. ಇದನ್ನೆಲ್ಲಾ ಇಟ್ಟುಕೊಂಡು ನನ್ನನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಜಗ್ಗುವ ಜಾಯಮಾನ ನನ್ನದಲ್ಲ’ ಎಂದರು.
‘ಮುಡಾ ಹಗರಣದಲ್ಲಿ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ ತಕ್ಷಣ ಸಿದ್ದರಾಮಯ್ಯ ಅವರು ಶಾಸಕರು, ಸಚಿವರ ಮೂಲಕ ರಾಜ್ಯಪಾಲರಿಗೆ ಧಮ್ಕಿ ಹಾಕಿದರು. ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ನನ್ನ ವಿರುದ್ಧ ಆರೋಪ ಬಂದಾಗ ನಾನೊಬ್ಬನೇ ಎಲ್ಲವನ್ನೂ ಎದುರಿಸಿದ್ದೆ. ವಿಧಾನಸಭೆ ಕಲಾಪದಲ್ಲೂ ಈ ಮಾತು ಹೇಳಿದ್ದೆ. ಸಿದ್ದರಾಮಯ್ಯ ಅವರಿಗೆ ಅದು ನೆನಪಿದೆಯಾ’ ಎಂದು ಪ್ರಶ್ನಿಸಿದರು.