ಮಂಗಳೂರು: ಹೊಸ ವರ್ಷದ ಆಚರಣೆಗಾಗಿ ಆಯೋಜಿಸಲಾಗಿದ್ದ “ಡಿಜೆ ಸಜಂಕಾ” ಕಾರ್ಯಕ್ರಮವನ್ನು ಹಿಂದೂ ಸಂಘಟನೆಗಳ ತೀವ್ರ ವಿರೋಧದಿಂದಾಗಿ ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ. ಡಿಜೆ ಕಾರ್ಯಕ್ರಮದಲ್ಲಿ ಹಿಂದೂ ದೇವರಿಗೆ ಅವಮಾನ ಆರೋಪ ಹಿನ್ನೆಲೆಯಲ್ಲಿ ಈ ವಿರೋಧ ವ್ಯಕ್ತವಾಗಿತ್ತು. ಪೊಲೀಸರು ಕೂಡ ಕಾರ್ಯಕ್ರಮಕ್ಕೆ ಅನುಮತಿ ನೀಡದಿರುವುದರಿಂದ ರದ್ದು ಮಾಡಲಾಗಿದೆ.
ಮಂಗಳೂರಿನ ಬೋಳಾರದ ಸಿಟಿ ಬೀಚ್ನಲ್ಲಿ ಡಿ. ೨೭ರ ಸಂಜೆ ನ್ಯೂ ಇಯರ್ ಆಚರಣೆಗೂ ಮೊದಲೇ ನಡೆಯಬೇಕಿದ್ದ ಇಸ್ರೇಲ್ ಮೂಲದ ಸಜಂಕಾ ಡಿಜೆ ಕಾರ್ಯಕ್ರಮ ಕೊನೆ ಕ್ಷಣದಲ್ಲಿ ರದ್ದಾಗಿದೆ. ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ಬೆನ್ನಲ್ಲೇ ಇದೀಗ ಕಾರ್ಯಕ್ರಮ ರದ್ದಾಗಿರುವುದಾಗಿ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಇನ್ನು ಈ ಕಾರ್ಯಕ್ರಮ ಪಾಶ್ಚಾತ್ಯ ಸಂಸ್ಕೃತಿಯಿಂದ ಕೂಡಿದ ಆರೋಪ ಕೇಳಿಬಂದಿದ್ದು, ಬಜರಂಗದಳ ಕಾರ್ಯಕ್ರಮದಲ್ಲಿ ಭಾರೀ ಪ್ರಮಾಣದ ಡ್ರಗ್ಸ್ ಪೂರೈಕೆ ಅನುಮಾನ ವ್ಯಕ್ತಪಡಿಸಿದೆ. ಮೃತ್ಯುಂಜಯ ಮಹಾ ಮಂತ್ರ, ರಾಮತಾರಕ ಮಂತ್ರ, ವಿಷ್ಣು ಸಹಸ್ರನಾಮ, ಗಾಯತ್ರಿ ಮಂತ್ರ, ದುರ್ಗಾ ಸಪ್ತತಿ ಮಂತ್ರ ಸೇರಿದಂತೆ ಶೋಕ, ಮಂತ್ರಗಳನ್ನು ಮತ್ತು ದೇವರ ಹಾಡುಗಳನ್ನು ವಿಚಿತ್ರವಾಗಿ ವಿಡಂಬನೆ ಮಾಡುವ ಮೂಲಕ ಧಾರ್ಮಿಕ ಭಾವನೆಗೆ ನಿಂದನೆ ಆರೋಪ ಮಾಡಲಾಗಿತ್ತು.