ಕಳೆದ ಎರಡು ಮೂರು ತಿಂಗಳುಗಳಿಂದ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಿಲ್ಲ. ಇದಕ್ಕೆ ರಾಜ್ಯದಾದ್ಯಂತ ಮಹಿಳೆಯರು, ಫಲಾನುಭವಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಈ ಮಧ್ಯೆ, ‘ಅದೇನು ತಿಂಗಳ ಸಂಬಳ ಅಲ್ವಲ್ಲಾ’ ಎಂದು ಸಚಿವ ಕೆಜೆ ಜಾರ್ಜ್ ಉತ್ತರ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ದುಡ್ಡು ಬಂದಿಲ್ಲ ಎಂದು ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಸಚಿವರು ಮಾತ್ರ ಉಡಾಫೆ ಉತ್ತರ ಕೊಟ್ಟಿದ್ದಾರೆ. ಪ್ರತಿ ತಿಂಗಳೂ ಮನೆ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ವರ್ಗಾವಣೆ ಮಾಡುತ್ತೇವೆ ಎಂದು ಚುನಾವಣೆಯ ವೇಳೆ ಮಾತು ಕೊಟ್ಟು ಅಧಿಕ್ಕಾರಕ್ಕೇರಿದ್ದರು. ಆದರೆ ಈಗ, ಗೃಹಲಕ್ಷ್ಮಿ ಹಣ ತಿಂಗಳ ತಿಂಗಳ ಸಂಬಳ ಅಲ್ವಲ್ಲಾ ಎಂದು ಜಾರ್ಜ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
‘ಗೃಹಲಕ್ಷ್ಮಿ ಹಣ ತಿಂಗಳು ಬರುವ ಸಂಬಳ ಅಲ್ಲವೇ ಅಲ್ಲ. ಆದರೆ, ಎರಡ್ಮೂರು ತಿಂಗಳಿಗೊಮ್ಮೆ, ನಮಗೆ ಇಷ್ಟ ಬಂದಾಗ ಕೊಡುತ್ತೇವೆ ಎಂದು ಹೇಳಿದ್ದರೆ ಮನೆ ಯಜಮಾನಿಯರು ಯಾರೂ ನಿಮ್ಮನ್ನ ಕೇಳುತ್ತಲೇ ಇರಲಿಲ್ಲ’ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.