ಕಾರವಾರ: ಸಾಮಾನ್ಯ ರಣಹದ್ದಿಗೆ ಜನರು ಹೆದರಲ್ಲ. ಆದರೆ ಇಲ್ಲೊಂದು ಕಡೆ ಹೈ ಪ್ರೊಫೈಲ್ ರಣಹದ್ದು ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ಜಿಪಿಎಸ್ ಟ್ರಾನ್ಸ್ಮೀಟರ್, ಟ್ಯಾಗ್ ಹೊಂದಿದ್ದ ರಣಹದ್ದು ಕಂಡು ಜನರು ಬೆಚ್ಚಿಬಿದ್ದಿದ್ದು ಪೊಲೀಸರಿಗೆ, ಅರಣ್ಯ ಇಲಾಖೆಗೆ ಮಾಹಿತಿ ತಲುಪಿಸಿದ್ದಾರೆ.
ಕಾರವಾರ ಬಳಿಯ ಕೋಡಿಭಾಗ್ನ ನದಿ ಸುತ್ತ ಕಳೆದ 5 ದಿನದಿಂದ ರಣಹದ್ದು ಹಾರಾಟ ನಡೆಸುತ್ತಿದೆ. ಕ್ಯಾಮರಾ ಮೂಲಕ ಜೂಮ್ ಮಾಡಿ ನೋಡಿದಾಗ ಜಿಪಿಎಸ್ ಟ್ರಾನ್ಸ್ಮೀಟರ್ ಹೊಂದಿರುವುದು ಬಹಿರಂಗವಾಗಿದೆ.
ರಣಹದ್ದಿನ ಕಾಲಿನಲ್ಲಿ ಟ್ಯಾಗ್, ಬೆನ್ನಿನ ಮೇಲೆ ಟ್ರಾನ್ಸ್ಮೀಟರ್ ನೋಡಿದ ಸ್ಥಳೀಯರು ಆತಂಕಗೊಂಡಿದ್ದು, ಶತ್ರು ದೇಶದವರು, ಉಗ್ರರು ಹಾರಿಸಿರಬಹುದೆಂದು ಶಂಕಿಸಿದ್ದಾರೆ. ಕಾರವಾರದಲ್ಲಿ ಅಣುಸ್ಥಾವರ, ನೌಕಾನೆಲೆ ಇರುವುದಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಇನ್ನು ಪೊಲೀಸರು, ಅರಣ್ಯ ಇಲಾಖೆ, ರಾಜ್ಯ, ಕೇಂದ್ರ ಐಬಿ ಅಧಿಕಾರಿಗಳಿಂದ ಪರಿಶೀಲನೆ ಮಾಡಲಾಗಿದ್ದು, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸಂಶೋಧನೆ ಉದ್ದೇಶಕ್ಕಾಗಿ ತಾಡೋಬಾ-ಅಂಧೇರಿ ಹುಲಿ ಸಂರಕ್ಷಿತಾರಣ್ಯದಿಂದ ರಣಹದ್ದು ಹಾರಿಸಲಾಗಿತ್ತು ಎಂಬುವುದು ತಿಳಿದು ಬಂದಿದೆ.
ರಣಹದ್ದುಗಳ ಜೀವನದ ಬಗ್ಗೆ ಅಧ್ಯಯನ ನಡೆಸುವ ಉದ್ದೇಶದಿಂದ Mahaforest.gov.in ಎಂದು ಬರೆದಿರುವ ಟ್ರಾನ್ಸ್ಮೀಟರ್ ಅಳವಡಿಕೆ ಮಾಡಿ ಹಾರಿಬಿಡಲಾಗಿದೆ. ವಿಚಾರ ತಿಳಿದ ಬಳಿಕ ಸದ್ಯ ಅರಣ್ಯ ಇಲಾಖೆ ಸಿಬ್ಬಂದಿಗಳು ರಣಹದ್ದಿಗೆ ಆಹಾರ ನೀಡಲು ಮುಂದಾಗಿದ್ದಾರೆ. ಸ್ಥಳೀಯರು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.