ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲೆ ಮಾರಣಾಂತಿಕ ದಾಳಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಕ್ಷಿಪ್ರವಾಗಿ ಸಾಗುತ್ತಿದೆ.
ಈ ಪ್ರಕರಣ ಸಂಬಂಧ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿಯಲ್ಲಿ ಸಿಕ್ಕಿರುವ ಆರೋಪಿಯ ಜಾಡು ಹಿಡಿದು ತನಿಖಾಧಿಕಾರಿಗಳು ಹೊರಟಿದ್ದಾರೆ. ವಿಶೇಷ ಅಂದ್ರೆ ಸೈಫ್ ಅಲಿ ಖಾನ್ ನಿವಾಸಕ್ಕೆ ಎನ್ಕೌಂಟರ್ ಸ್ಪೆಷಲಿಸ್ಟ್, ಕರ್ನಾಟಕ ಮೂಲದ ದಯಾ ನಾಯಕ್ ಹೋಗಿದ್ದಾಗಿ ಮೂಲಗಳು ತಿಳಿಸಿವೆ.
ದಯಾ ನಾಯಕ್ ಕರ್ನಾಟಕದ ಉಡುಪಿಯವರು. ‘ಎನ್ಕೌಂಟರ್ ಸ್ಪೆಷಲಿಸ್ಟ್’ ಅಂತಲೇ ಜನಪ್ರಿಯರಾಗಿದ್ದಾರೆ. ಕೊಂಕಣಿ ಕುಟುಂಬದಲ್ಲಿ ಜನಿಸಿದ ದಯಾ ನಾಯಕ್, ಬಡ್ಡ ಮತ್ತು ರಾಧಾ ನಾಯಕ್ ದಂಪತಿಯ ಕಿರಿಯ ಪುತ್ರ.
1995ರಲ್ಲಿ ಪೊಲೀಸ್ ಅಕಾಡೆಮಿಯಿಂದ ಪದವಿ ಪಡೆದ ನಂತರ ಜುಹು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಆಗಿ ನೇಮಕಗೊಂಡರು. ಆ ಸಮಯದಲ್ಲಿ ಮುಂಬೈನಲ್ಲಿ ಭೂಗತ ಜಗತ್ತು ಉತ್ತುಂಗದಲ್ಲಿತ್ತು. 1996 ರಲ್ಲಿ ಮುಂಬೈನ ಜುಹುದಲ್ಲಿ ಇಬ್ಬರು ಛೋಟಾ ರಾಜನ್ ಸಹಚರರನ್ನು ಎನ್ಕೌಂಟರ್ ಮಾಡುವ ಮೂಲಕ ದಯಾ ನಾಯಕ್ ಮುನ್ನಲೆಗೆ ಬಂದರು. ಮುಂದಿನ ದಿನಗಳಲ್ಲಿ ದರೋಡೆಕೋರರಿಗೆ, ರೌಡಿಗಳಿಗೆ ದುಸ್ವಪ್ನವಾಗಿ ಕಾಡಿದರು.
ಮಹಾರಾಷ್ಟ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಆಗಿರುವ ದಯಾ ನಾಯಕ್ ಅವರ ರಿಯಲ್ ಎನ್ಕೌಂಟರ್ ಕಥೆಗಳು ಸಿನಿಮಾ ಆಗಿ ತೆರೆ ಮೇಲೆ ಬಂದಿದೆ. ಮುಂಬೈ ದರೋಡೆಕೋರರ ಹುಟ್ಟಡಗಿಸಿದ ಖ್ಯಾತಿ ಇವರದ್ದು. 1990ರ ದಶಕದಲ್ಲಿ 80ಕ್ಕೂ ಹೆಚ್ಚು ಭೂಗತ ದರೋಡೆಕೋರರ ಫಿನಿಶ್ ಮಾಡಿದ್ದಾರೆ.