ಪುತ್ತೂರು: ‘ಹಿಂದೂ ಧರ್ಮದ ಮಕ್ಕಳಿಗೆ ಬಾಲ್ಯದಲ್ಲೇ ಧಾರ್ಮಿಕ ಶಿಕ್ಷಣ ನೀಡುವ ಉದ್ದೇಶದಿಂದ ಶೃಂಗೇರಿ ಮಠದ ಮಾರ್ಗದರ್ಶನದಲ್ಲಿ ಪುತ್ತೂರಿನಲ್ಲಿ ‘ಹಿಂದೂ ಧರ್ಮ ಶಿಕ್ಷಣ’ ತರಬೇತಿ ಪ್ರಾರಂಭವಾಗಲಿದೆ. ಮೇ 5ರಂದು ಶೃಂಗೇರಿಯಲ್ಲಿ ವಿಧುಶೇಖರ ಭಾರತಿ ಸ್ವಾಮೀಜಿ ಈ ಯೋಜನೆಗೆ ಚಾಲನೆ ನೀಡುವರು’ ಎಂದು ಹಿಂದೂ ಧರ್ಮ ಶಿಕ್ಷಣ ಪುತ್ತೂರು ತಾಲ್ಲೂಕು ಸಮಿತಿಗಳ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೂ ಧರ್ಮ ಶಿಕ್ಷಣ’ಕ್ಕಾಗಿ ಈಗಾಗಲೇ ಪುತ್ತೂರು ತಾಲೂಕಿನಲ್ಲಿ 30 ಗ್ರಾಮ ಸಮಿತಿಗಳು ರಚನೆಯಾಗಿವೆ. ಭಜನಾ ಮಂದಿರ ಅಥವಾ ದೇವಸ್ಥಾನದಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಕೊಡುವ ವ್ಯವಸ್ಥೆ ಮಾಡಲಾಗುವುದು.
ಇದಕ್ಕಾಗಿ ಶೃಂಗೇರಿ ಮಠದಲ್ಲಿ ಪಠ್ಯ ರೂಪಿಸಲಾಗುತ್ತಿದೆ. ಪಠ್ಯಕ್ರಮ ಅಂತಿಮಗೊಂಡ ನಂತರ ಪುತ್ತೂರು ಮತ್ತು ಕಡಬ ತಾಲ್ಲೂಕಿನ ಗ್ರಾಮ ಸಮಿತಿಗಳ ಉಸ್ತುವಾರಿಯಲ್ಲಿ ತರಗತಿಗಳು ನಡೆಯಲಿವೆ. ಪುತ್ತೂರಿನಿಂದ ಆರಂಭಗೊಳ್ಳುವ ಈ ಧರ್ಮಶಿಕ್ಷಣ ರಾಷ್ಟ್ರದಾದ್ಯಂತ ವಿಸ್ತರಣೆಗೊಳ್ಳಲಿದೆ. ತರಗತಿಗಳನ್ನು ನಡೆಸುವ ಶಿಕ್ಷಕರಿಗೆ ಶೃಂಗೇರಿ ಮಠದಲ್ಲಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗುವುದು’ ಎಂದರು.
“ಯೋಜನೆಯನ್ನು ಶೃಂಗೇರಿ ಮಠ ಆಯೋಜಿಸುತ್ತಿದೆ’ ಎಂದು ಪುತ್ತೂರು ತಾಲ್ಲೂಕು ಹಿಂದೂ ಶಿಕ್ಷಣ ಸಮಿತಿ ಉಪಾಧ್ಯಕ್ಷ ಆರ್.ಸಿ ನಾರಾಯಣ ಹೇಳಿದರು.