ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಶುಕ್ರವಾರದಂದು ಆರಂಭವಾಗಿದೆ. ಚುನಾವಣೆ ನಡೆದು ದಿನಗಳು ಕಳೆಯುತ್ತಿದ್ದಂತೆ ಬಿಜೆಪಿಗೆ ಸಿಡಿಲಾಘಾತದಂತಹ ಸುದ್ದಿ ಎದುರಾಗಿದೆ. ಮೊರಾದಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸರ್ವೇಶ್ ಸಿಂಗ್ (Kunwar Sarvesh Singh) ಇಂದು ನಿಧನರಾಗಿದ್ದಾರೆ. ಮತದಾನ ಮಾಡಿದ ಮರುದಿನವೇ ಹೃದಯಾಘಾತದಿಂದ ಅಭ್ಯರ್ಥಿ ಸಾವನ್ನಪ್ಪಿದ್ದಾರೆ.
72 ವರ್ಷದ ಸಿಂಗ್ ಅವರು ಮಾರ್ಚ್ ತಿಂಗಳಲ್ಲಿ ಹಲ್ಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಅವರು ಅಸ್ವಸ್ಥರಾಗಿದ್ದರು. ಏಪ್ರಿಲ್ 19 ರಂದು ಅವರು ತಮ್ಮ ಹುಟ್ಟೂರಾದ ರತುಪುರ ಗ್ರಾಮದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಇಂದು ಬೆಳಗ್ಗೆ ಅವರನ್ನು ಚಿಕಿತ್ಸೆಗಾಗಿ ಏಮ್ಸ್ಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಹೃದಯಾಘಾತದಿಂದ ನಿಧನರಾದರು ಎಂದು ಸಂಬಂಧಿಕರು ಹೇಳಿದ್ದಾರೆ.
ಸರ್ವೇಶ್ ಸಿಂಗ್ 1991 ರಲ್ಲಿ ಬಿಜೆಪಿ (BJP) ಟಿಕೆಟ್ನಲ್ಲಿ ಠಾಕುರ್ದ್ವಾರ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 2009ರಲ್ಲಿ ಮಾಜಿ ಕ್ರಿಕೆಟಿಗ ಅಜರುದ್ದೀನ್ ವಿರುದ್ಧ ಸುಮಾರು 50 ಸಾವಿರ ಮತಗಳಿಂದ ಸೋತಿದ್ದರು. 2014ರಲ್ಲಿ ಬಿಜೆಪಿಯಿಂದ ಸಂಸದರಾಗಿಯೂ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು ಅವರು ಜಿಲ್ಲೆಯ ಠಾಕುರ್ದ್ವಾರ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದರು. ಮೊರಾದಾಬಾದ್ ಲೋಕಸಭಾ ಕ್ಷೇತ್ರದಿಂದ ಸರ್ವೇಶ್ ಸಿಂಗ್ ಅವರನ್ನು ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿತ್ತು.
ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಮಾನ್ಯತೆ ಪಡೆದ ರಾಜಕೀಯ ಪಕ್ಷದ ಅಭ್ಯರ್ಥಿ ಮರಣ ಹೊಂದಿದ್ದಲ್ಲಿ ಆ ಕ್ಷೇತ್ರದಲ್ಲಿ ಮರು ಮತದಾನ ನಡೆಯುತ್ತದೆ. ಮರಣ ಹೊಂದಿದ ಏಳು ದಿನಗಳಲ್ಲಿ ಹೊಸ ಅಭ್ಯರ್ಥಿಯ ನಾಮ ನಿರ್ದೇಶನ ಮಾಡಲು ಪಕ್ಷಕ್ಕೆ ಅವಕಾಶ ನೀಡಲಾಗುತ್ತದೆ. ಮೊರಾದಾಬಾದ್ ನಲ್ಲಿ ಬಿಜೆಪಿ ಯಾವ ರೀತಿಯ ಹೆಜ್ಜೆಯನ್ನು ಇಡುತ್ತದೆ ಎಂಬುವುದು ಮುಂದಿನ ದಿನಗಳಲ್ಲಿ ತಿಳಿದುಬರಲಿದೆ.