ದಳಪತಿ ವಿಜಯ್ ಸದ್ಯ ಸಿನಿಮಾ ಹಾಗೂ ರಾಜಕೀಯ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಶೀಘ್ರವೇ ಅವರು ಸಿನಿಮಾ ರಂಗ ತೊರೆದು ರಾಜಕೀಯದಲ್ಲಿ ಬ್ಯುಸಿ ಆಗಲಿದ್ದಾರೆ. ಮಾರ್ಚ್ 7ರ ಶುಕ್ರವಾರ ವಿಜಯ್ ಅವರು ಚೆನ್ನೈನಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಭಾಗಿ ಆಗಿದ್ದಾರೆ. ಈ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ವಿಜಯ್ ಅವರನ್ನು ಹೊಗಳಿದರೆ, ವಿರೋಧಿಗಳು ಅವರ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.
ವರದಿಗಳ ಪ್ರಕಾರ ವಿಜಯ್ ಅವರು ಮುಂಜಾನೆಯಿಂದ ಉಪವಾಸ ಮಾಡಿದ್ದರು ಎನ್ನಲಾಗಿದೆ. ನಂತರ ರಾತ್ರಿ ವೇಳೆ ಅವರು ಊಟ ಸೇವನೆ ಮಾಡಿದ್ದಾರೆ. ವಿಜಯ್ ಜೊತೆ ಹಲವು ಸ್ಥಳೀಯ ಮುಸ್ಲಿಂ ನಾಯಕರು ಭಾಗಿ ಆಗಿದ್ದಾರೆ. ವಿಜಯ್ ಅವರು ಭಾಗಿ ಆದ ಇಫ್ತಾರ್ ಕೂಟದಲ್ಲಿ 3 ಸಾವಿರಕ್ಕೂ ಅಧಿಕ ಜನರು ಸೇರಿದ್ದರು.
ದಳಪತಿ ವಿಜಯ್ ಅವರು 2026ರ ತಮಿಳುನಾಡು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಇದಕ್ಕಾಗಿ ‘ತಮಿಳಗ ವೆಟ್ರಿ ಕಳಗಮ್’ (TVK) ಪಕ್ಷ ಸ್ಥಾಪನೆ ಮಾಡಿದ್ದಾರೆ. ವಿಜಯ್ ಅವರು ತಲೆಗೆ ಟೋಪಿ ಹಾಕಿ ಇಫ್ತಾರಿ ಕೂಟದಲ್ಲಿ ಭಾಗಿ ಆಗಿದ್ದಾರೆ. ಅವರು ಮುಸ್ಲಿಂ ಸಂಪ್ರದಾಯದಂತೆ ನಡೆದುಕೊಂಡಿದ್ದಾರೆ. ಅವರ ಅಭಿಮಾನಿಗಳು ಇದನ್ನು ಹೊಗಳಿದ್ದಾರೆ. ಎಲ್ಲಾ ಧರ್ಮವನ್ನು ವಿಜಯ್ ಗೌರವಿಸುತ್ತಿದ್ದಾರೆ ಎಂದು ಸಂತಸ ಹೊರಹಾಕಿದ್ದಾರೆ. ಆದರೆ, ಅವರ ವಿರೋಧಿಗಳು ‘ವೋಟ್ ಬ್ಯಾಂಕ್ ರಾಜಕೀಯ’ ಎಂದು ಟೀಕಿಸಿದ್ದಾರೆ.