ಯಾದಗಿರಿ: ಹಿಂದೂ ಮನೆಗೆ ತೆರಳಿ ಬಲವಂತವಾಗಿ ಕ್ರೈಸ್ತ ಮತದ ಕರಪತ್ರ ಹಂಚಿ ಮತಾಂತರಕ್ಕೆ ಯತ್ನಿಸಿದ ಆರೋಪ ನಗರದ ಲಕ್ಷ್ಮೀ ಬಡಾವಣೆಯಲ್ಲಿ ಕೇಳಿಬಂದಿದೆ.
ಕೂಡಲೇ ಎಚ್ಚೆತ್ತ ಜನ, ಮತಾಂತರಕ್ಕೆ ಮುಂದಾದ ಇಬ್ಬರು ಕ್ರಿಶ್ಚಿಯನ್ ಮಹಿಳೆಯರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರು ಮೂಲದ ಮಹಿಳೆಯರಾದ ರೇಚಲ್ ರಾಬರ್ಟ್ ಹಾಗೂ ಕರುಣಾ ಅವರು, ಮತಾಂತರಕ್ಕೆ ಮುಂದಾಗಿದ್ದರು. ಇನ್ನಿಬ್ಬರು ಮಹಿಳೆಯರು ಪರಾರಿಯಾಗಿದ್ದಾರೆ.
ಈ ಕ್ರಿಶ್ಚಿಯನ್ ಮಹಿಳೆಯರು ಹಿಂದು ಮನೆಗಳಿಗೆ ತೆರಳಿ ಹಿಂದೂ ದೇವರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರಂತೆ. ‘ಭೂಮಿ ಮೇಲೆ ದೇವರು ಅಂತ ಇದ್ದರೆ ಯೇಸುಕ್ರಿಸ್ತ ಒಬ್ಬನೆ. ನಿಮ್ಮ ದೇವರುಗಳು ನಿಮಗೆ ರಕ್ಷಣೆ ನೀಡುವುದಿಲ್ಲ. ನಿಮ್ಮ ಹಿಂದೂ ಧರ್ಮ ತ್ಯಜಿಸಿ, ಕ್ರೈಸ್ತ ಧರ್ಮಕ್ಕೆ ಬನ್ನಿ. ನಿಜವಾದ ದೇವರು ಯೇಸುಕ್ರಿಸ್ತನನ್ನು ಅನುಸರಿಸಲು ಹಿಂದು ಧರ್ಮ ತ್ಯಜಿಸಿ ಮತಾಂತರಗೊಳ್ಳಿ’ ಎಂಬುವುದಾಗಿ ಹೇಳಿದ್ದಾರೆ.
ಹೀಗೆ ನಮ್ಮ ಮನೆಗೆ ಬಂದು ನಮ್ಮನ್ನು ಬಲವಂತವಾಗಿ ಮತಾಂತರ ಮಾಡುವುದಕ್ಕೆ ಪ್ರಚೋದನೆ ಮಾಡಿದ್ದಾರೆ. ಇಂತಹ ಕೃತ್ಯ ಎಸಗಿದ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಯಾದಗಿರಿ ನಗರ ಠಾಣೆಗೆ ಜನರು ದೂರು ನೀಡಿದ್ದಾರೆ.