ಕೋಲಾರ: ಕಾಲೇಜು ಆವರಣದಲ್ಲೇ ಮಚ್ಚು-ಲಾಂಗ್ಗಳಿಂದ ಕೊಚ್ಚಿ PUC ವಿದ್ಯಾರ್ಥಿಯ ಬರ್ಬರ ಹತ್ಯೆಯಾಗಿರುವ ಭೀಕರ ಘಟನೆ ಜಿಲ್ಲೆಯ ಪೇಟೆಚಾಮನಹಳ್ಳಿ ಬಡಾವಣೆಯಲ್ಲಿ ನಡೆದಿದೆ.
ಕಾರ್ತಿಕ್ ಸಿಂಗ್ (17) ಕೊಲೆಯಾದ ವಿದ್ಯಾರ್ಥಿ. ಹತ್ಯೆಯಾಗಿರುವ ವಿದ್ಯಾರ್ಥಿ ಪ್ರಥಮ ಪಿಯುಸಿ ಓದುತ್ತಿದ್ದ.
ಕಾರ್ತಿಕ್ ನಿನ್ನೆ ಕಾಲೇಜಿಗೆ ಹೋಗಿರಲಿಲ್ಲ. ಹೊಟ್ಟೆ ನೋವು ಎಂಬ ಕಾರಣದಿಂದ ರಜೆ ಹಾಕಿ ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದ. ಇದ್ದಕ್ಕಿದ್ದಂತೆ ಸ್ನೇಹಿತರಿಂದ ಕರೆಯೊಂದು ಬಂದಿದೆ ಬಳಿಕ ಅಮ್ಮನಿಗೆ ತಿಳಿಸಿ ಹೊರಗಡೆ ಹೋಗಿದ್ದ. ರಾತ್ರಿ 7:30 ರಿಂದ 8 ಗಂಟೆ ಸುಮಾರಿಗೆ ಕಾಲೇಜು ಆವರಣದಲ್ಲಿ ದುಷ್ಕರ್ಮಿಗಳು ಯುವಕನನ್ನ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಹೋಗಿ ಬರುತ್ತೇನೆ ಅಮ್ಮ ಎಂದು ಹೇಳಿದ್ದ ಕಾರ್ತಿಕ್ ಮನೆಗೆ ಮರಳಿದ್ದ ಶವವಾಗಿ. ಇನ್ನು ಕಾರ್ತಿಕ್ ಮೃತ ದೇಹದ ಮೇಲೆ ಲಾಂಗು-ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಿರುವ ಗುರುತುಗಳು ಪತ್ತೆಯಾಗಿವೆ. ಜೊತೆಗಿದ್ದ ಯುವಕರ ಗ್ಯಾಂಗ್ ಕೊಲೆ ಮಾಡಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಸದ್ಯ ಘಟನಾ ಸ್ಥಳಕ್ಕೆ ಕೋಲಾರ ನಗರ ಠಾಣಾ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲು ಮಾಡಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಆರೋಪಿಗಳು ಸಿಕ್ಕ ಬಳಿಕ ಈ ಕೊಲೆ ಕಾರಣ ಏನು ಎಂಬುದು ಬಯಲಾಗಬೇಕಿದೆ.