ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಸರಿಗಮಪ ರಿಯಾಲಿಟಿ ಶೋ ನಲ್ಲಿ ಜ್ಯೂರಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದ ಹಿರಿಯ ಕಲಾವಿದ ನಿಧನರಾಗಿದ್ದಾರೆ. 1970ರ ದಶಕದಲ್ಲಿ ಬಹುಬೇಡಿಕೆಯ ಸಂಗೀತಗಾರರಾಗಿದ್ದ ಎಸ್. ಬಾಲಸುಬ್ರಹ್ಮಣ್ಯಂ ಅವರು ಎಸ್. ಬಾಲಿ ಎಂದೇ ಖ್ಯಾತಿ ಪಡೆದಿದ್ದಾರೆ. ಇವರ ಅಗಲುವಿಕೆಗೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.
ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್ ಆಗಿರುವ ಇವರನ್ನು ಕನ್ನಡ ಚಿತ್ರರಂಗದಲ್ಲಿ ರಿದಂ ಕಿಂಗ್ ಎಂದೇ ಕರೆಯುತ್ತಿದ್ದರು. ಎಸ್. ಬಾಲಸುಬ್ರಹ್ಮಣ್ಯಂ ಅವರು ಕವಿ ನಿಸಾರ್ ಅಹಮ್ ಅವರ ನಿತ್ಯೋತ್ಸವದಿಂದ ಹಿಡಿದು ಮೈಸೂರು ಅನಂತಸ್ವಾಮಿ ಅವರ ಸಂಯೋಜನೆಗಳಿಗೆ ಸಹಾಯಕರಾಗಿ ವಾದ್ಯದ ನೆರವು ನೀಡಿದ್ದಾರೆ ಎನ್ನುವ ಹೆಗ್ಗಳಿಕೆ ಇದೆ.
ಅವರು ಕಿರುತೆರೆ ಹಾಗೂ ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿರುವುದಲ್ಲದೇ ಹಲವಾರು ಧ್ವನಿಸುರುಳಿಗಳನ್ನು ಬಿಡುಗಡೆ ಮಾಡಿದ್ದರು. ಇನ್ನು ಎಸ್ ಬಾಲಸುಬ್ರಹ್ಮಣ್ಯಂ ಅವರು ತಬಲ, ಮೃದಂಗ, ಢೋಲ್ಕಿ , ಢೋಲಕ್ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಲಯ ವಾದ್ಯಗಳನ್ನು ನುಡಿಸುವಲ್ಲಿ ಪರಿಣಿತರಾಗಿದ್ದರು.
ಎಂ.ವಿ. ಸುಂದರೇಶನ್ ಮತ್ತು ಸಾವಿತ್ರಿ ದಂಪತಿಯ ಪುತ್ರರಾಗಿರುವ ಎಸ್. ಬಾಲಸುಬ್ರಹ್ಮಣ್ಯಂ ಅವರು 1953ರ ಜನವರಿ 9ರಂದು ಬೆಂಗಳೂರಿನಲ್ಲಿ ಜನಿಸಿದರು. ಬಹುವಾದ್ಯ ಪರಿಣಿತರಾಗಿ ಇತ್ತೀಚಿಗೆ, ಸರಿಗಮಪ ಶೋನಲ್ಲಿ ಎಲ್ಲರನ್ನೂ ರಂಜಿಸುತ್ತಿದ್ದ ಹಾಗೂ ಸ್ಪರ್ಧಿಗಳ ತಪ್ಪುಗಳನ್ನು ತಿದ್ದುತ್ತಿದ್ದ ಎಸ್. ಬಾಲಿ ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.