Friday, June 27, 2025

ಕುಡಿದ ಮತ್ತಿನಲ್ಲಿ ಸ್ನೇಹಿತರ ಜಗಳ: ಕಲ್ಲು ಎತ್ತು ಹಾಕಿ ಇಮ್ತಿಯಾಝ್‌ನ ಕೊಲೆ

ಕುಮಟಾ: ತಾಲೂಕಿನ ಸರ್ಕಾರಿ ಆಸ್ಪತ್ರೆಯ ಹಿಂಬದಿಯ ವಸತಿ ನಿಲಯದಲ್ಲಿ ರಾತ್ರಿ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡು ಒಬ್ಬ ವ್ಯಕ್ತಿಯ ತಲೆಯ ಮೇಲೆ ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿದ ಘಟನೆ ನಡೆದಿದೆ. ಹುಬ್ಬಳ್ಳಿ ಇಂದಿರಾನಗರದ ಇಮ್ತಿಯಾಝ ಕೊಲೆಯಾದ ಕಾರ್ಮಿಕ ಎನ್ನಲಾಗಿದೆ. ಕುಮಟಾದ ಸರ್ಕಾರಿ ಆಸ್ಪತ್ರೆ ಹಾಗೂ ವಸತಿ ನಿಲಯದ ಗಾರೆ ಕೆಲಸ ಹಾಗೂ ಪೈಂಟಿಂಗ್ ಕೆಲಸಕ್ಕಾಗಿ ಗುತ್ತಿಗೆ ಆಧಾರದ ಮೇಲೆ ಹುಬ್ಬಳ್ಳಿ ಮೂಲದ ನಾಲ್ವರು ಬಂದಿದ್ದರು.

ಮಧ್ಯ ರಾತ್ರಿ ಸುಮಾರು 12 ಗಂಟೆಯ ಸುಮಾರಿಗೆ ಒಂದೇ ರೂಮಿನಲ್ಲಿದ್ದ ನಾಲ್ಕು ಜನರು ಮದ್ಯದ ಪಾರ್ಟಿ ಮಾಡಿದ್ದರು. ಈ ವೇಳೆ ನಾಲ್ವರ ಪೈಕಿ ಮೊಯುದ್ದೀನ್ ಎಂಬಾತ ಊಟ ಮಾಡಿ ನಿದ್ದೆಗೆ ಜಾರಿದ್ದ. ಇಮ್ತಿಯಾಜ್ ಹಾಗೂ ಉಳಿದ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಮದ್ಯದ ಅಮಲಿನಲ್ಲಿ ಇಬ್ಬರು ಇಮ್ತಿಯಾಝ್‌ನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಹುಬ್ಬಳ್ಳಿಗೆ ಪರಾರಿಯಾಗಿದ್ದಾರೆ.

ಬೆಳಿಗ್ಗೆ ಮೊಯುದ್ದೀನ್ ಎದ್ದು ನೋಡುವಷ್ಟರಲ್ಲಿ ರೂಂ ಮುಂದೆ ಹೆಣವಾಗಿ ಇಮ್ತಿಯಾಜ್ ಬಿದ್ದಿದ್ದು ನಂತರ ಕುಮಟಾ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕುಮಟಾ ಪೋಲೀಸರು ಸ್ಥಳ ಮಜರು ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಆಗಮಿಸಿ ತನಿಖೆ ನಡೆಸಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.

ಕುಮಟಾ ಪಿಎಸ್‌ಐ ಮಯೂರ್ ನೇತೃತ್ವದ ತಂಡ ಕೂಡಲೇ ಕೂಡಲೇ ಕಾರ್ಯಪ್ರವೃತ್ತರಾಗಿ ಹುಬ್ಬಳ್ಳಿಯತ್ತ ಪರಾರಿಯಾಗಿದ್ದ ಆರೋಪಿಗಳಾದ ಮೌನೇಶ್ ಹಾಗೂ ಸಾಧಿಕ್ ಎನ್ನುವವರನ್ನು ಬಂಧಿಸಿ ಕುಮಟಾಕ್ಕೆ ಕರೆತರುವ ಕೆಲಸ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದಿಲ್ಲ.‌ ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Latest Articles