ಲಕ್ಷ ಲಕ್ಷ ಭಕ್ತರ ಕಾತರ, ಶಕ್ತಿದೇವತೆಯನ್ನು ಕಣ್ಣುತುಂಬಿಕೊಳ್ಳುವ ಕುತೂಹಲ. ಅಧಿದೇವತೆಯ ಪವಾಡಗಳನ್ನು ಕಣ್ಣಾರೆ ಕಾಣುವ ಹಂಬಲ. ವರ್ಷದಿಂದ ಭಕ್ತರು ಕಾಯುತ್ತಿದ್ದ ಆ ಒಂದು ಕ್ಷಣ ಕಡೆಗೂ ಬಂದಿದೆ.
ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ದರ್ಶನೋತ್ಸವ ಗುರುವಾರದಿಂದ ಆರಂಭಗೊಂಡಿದೆ. ಮದ್ಯಾಹ್ನ 12 ಗಂಟೆ 10 ನಿಮಿಷಕ್ಕೆ ಮಂತ್ರಘೋಷಗಳೊಂದಿಗೆ ಮಂಗಳ ವಾದ್ಯಗಳ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲಿಗೆ ಪೂಜೆ ಸಲ್ಲಿಸಿ ಗರ್ಭಗುಡಿ ಬಾಗಿಲು ತೆರೆಯಲಾಯಿತು.
ಗರ್ಭಗುಡಿ ಬಾಗಿಲು ತೆರೆಯುವ ವೇಳೆಯಲ್ಲಿ ತೆನೆ ಇರುವ ಬಾಳೆ ಕಡಿಯುವ ಮೂಲಕ ಗರ್ಭಗುಡಿ ಬಾಗಿಲು ತೆರೆಯುವ ಸೂಚನೆ ಸಿಗುತ್ತಲೇ ಬಾಗಿಲು ತೆರೆದ ಅರ್ಚಕರು ಗರ್ಭಗುಡಿಯೊಳಗೆ ಕಳೆದ ವರ್ಷ ಹಚ್ಚಿಟ್ಟ ದೀಪ ಬೆಳಗುತ್ತಿರುವುದು ಹಾಗೂ ಬಾಡದ ಹೂವನ್ನು ದರ್ಶನ ಮಾಡಿದರು.
ನೆರೆದಿದ್ದ ಗಣ್ಯರು, ಸಹಸ್ರ ಸಹಸ್ರ ಭಕ್ತರು ದೇವಿಯ ವಿಶ್ವರೂಪ ದರ್ಶನ ಮಾಡುವ ಮೂಲಕ ಪುನೀತರಾಗಿದ್ದು, 11 ದಿನಗಳು ನಡೆಯುವ ಸಂಭ್ರಮದ ಹಾಸನಾಂಬೆ ಉತ್ಸವಕ್ಕೆ ಲಕ್ಷ ಲಕ್ಷ ಭಕ್ತರು ಸಾಕ್ಷಿಯಾಗಲಿದ್ದಾರೆ.
ಗರ್ಭಗುಡಿ ಬಾಗಿಲನ್ನು ತೆರೆಯುತ್ತಿದ್ದಂತೆಯೇ ಭಕ್ತರು ಹಾಗೂ ಸಾರ್ವಜನಿಕರು, ಹಾಸನಾಂಬೆಗೆ ಉಘೇ ಉಘೇ ಎಂದು ಘೋಷಣೆ ಕೂಗಿ ಭಕ್ತಿಭಾವ ಮೆರೆದರು. ಮಂಗಳವಾದ್ಯಗಳೊಂದಿಗೆ ಪೂಜಾ ಸಾಮಗ್ರಿ ತಂದು ಗರ್ಭಗುಡಿ ಬಾಗಿಲ ಎದುರು ವಿಶೇಷ ಪೂಜೆ ನೆರವೇರಿಸಿದ ಅರ್ಚಕ ವೃಂದ, ನಂತರ ನಿಗದಿತ ಮುಹೂರ್ತದ ಸಮಯದಲ್ಲಿ ಬಾಗಿಲು ತೆರೆದು ದರ್ಶನಕ್ಕೆ ಅವಕಾಶ ನೀಡಿದರು.