Saturday, June 28, 2025

ಕಾರ್ಕಳ: ಕಾಡಿನಲ್ಲಿದೆ ಪ್ರಾಚೀನ ಹೆರಿಗೆ ಕಲ್ಲು! – ಏನಿದರ ವಿಶೇಷತೆ

ಪ್ರಾಚೀನ ಕಾಲದಲ್ಲಿ ದೇಶಿಯ ವೈದ್ಯ ಪದ್ಧತಿ ಮೂಲಕ ಹೆರಿಗೆಗಳು ನಡೆಯುತ್ತಿದ್ದವು. ಅದರ ಪಳೆಯುಳಿಕೆ ಎಂಬಂತೆ ಕಾರ್ಕಳ ತಾಲೂಕಿನ ಅಂಡಾರಿನಲ್ಲೊಂದು (ಶಿರ್ಲಾಲು) ವಿಶೇಷ ಕಲ್ಲಿದೆ. ಇದು ಹಿರಿಯರ ನಂಬಿಕೆಯ ಪೆದೆ³ತಿ ಕಲ್ಲು. ಮಹಿಳೆಯೊಬ್ಬಳು ಕುಳಿತು ಪ್ರಸವಿಸುವ ಮಾದರಿಯ ಕಲ್ಲಿದು. ವಿಶಿಷ್ಟ ಸಂಪ್ರದಾಯ, ಪದ್ಧತಿಗೆ ಸಾಕ್ಷಿಯಾಗಿರುವ ಕಲ್ಲು ಈಗ ಅಳಿವಿನಂಚಿನಲ್ಲಿದೆ.

ಅಂಡಾರು ಸಮೀಪ ಬೈತಾಳ ಶಾಲೆಯಿಂದ 8 ಕಿ.ಮೀ. ದೂರದಲ್ಲಿ ಈ ಕಲ್ಲಿದೆ. ಅಜ್ಜಿಕುಂಜ ರಸ್ತೆ ಬಳಿಯ ಅಭಯಾರಣ್ಯದೊಳಗೆ ಈ ಕಲ್ಲು ಕಾಣ ಸಿಗುತ್ತದೆ. ಆದಿವಾಸಿಗಳೆ ಈ ಭಾಗದಲ್ಲಿ ಹೆಚ್ಚಾಗಿ ವಾಸವಿದ್ದರು. ಆ ದಿನಗಳಲ್ಲಿ ಮಹಿಳೆಯರು ಪ್ರಸವ ವೇದನೆ ಸಂದರ್ಭ ಹೆರಿಗೆಗಾಗಿ ಈ ಕಲ್ಲಿನ ಬಳಿ ಬರುತಿದ್ದರು ಎನ್ನುವ ಪ್ರತೀತಿಯಿದೆ.

ಮುಂದೆ ಇಲ್ಲಿ ಸಂಪ್ರದಾಯವೊಂದು ಪಾಲನೆಯಾಗಿ ಜಾರಿಗೆ ಬಂದಿದೆ. ಪ್ರಸವ ವೇದನೆ ಸಂದರ್ಭ ಇಲ್ಲಿನ ಕಲ್ಲಿನ ಮೂರ್ತಿಗೆ ಹರಕೆ ಹೇಳಲಾಗುತ್ತದೆ. ಹಿರಿಯರು ಹೇಳುವ ಪ್ರಕಾರ ಅವಲಕ್ಕಿ ಹರಕೆ ಇಲ್ಲಿ ಕಲ್ಲಿಗೆ ಸಮರ್ಪಣೆಯಾಗುತ್ತಿತ್ತು.

ಬಂಡೆ ಕಲ್ಲಿನ ಬದಿಯಲ್ಲಿ 2 ಅಡಿ ಎತ್ತರದ ಮೂರ್ತಿ ಇದೆ. ಇದು ಮಹಿಳೆ ಕುಳಿತು ಹೆರಿಗೆ ಮಾಡುವ ವಿಧಾನದ ಮೂರ್ತಿಯಾಗಿದೆ. ಅಲ್ಲಿರುವ ಬಂಡೆಯ ಮೇಲೆ ಸಮತಟ್ಟಿದೆ. ಪಕ್ಕದಲ್ಲೇ ಸಣ್ಣ ತೋಡು ಹರಿಯುತ್ತಿದೆ. ಇಲ್ಲಿ ವರ್ಷದ ಎಲ್ಲ ಋತುಗಳಲ್ಲಿ ನೀರು ಹರಿಯುತ್ತಿರುತ್ತದೆ. ಹಿಂದೆ ಹೆರಿಗೆ ತೊಂದರೆಗಳಿಗೆ ಇಲ್ಲಿ ಪ್ರಾರ್ಥಿಸಿ ಅದಾದ ಬಳಿಕ ಸುಗಮ ಹೆರಿಗೆ ಆದ ಬಳಿಕ ಅಲ್ಲಿಗೆ ತೆರಳಿ ಹರಕೆ ಸಲ್ಲಿಸುತ್ತಿದ್ದರು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.

ಇಲ್ಲಿರುವ ಹೆರಿಗೆ ಕಲ್ಲಿನ ಬಗ್ಗೆ ಬೇರೆ ಬೇರೆ ಕಥೆಗಳೂ ಹರಿದಾಡುತ್ತಿವೆ. ಇಲ್ಲಿ ಹೆರಿಗೆಗೆ ಕುಳಿತ ಮಹಿಳೆ ಮಾಯವಾಗಿದ್ದಳು. ಅವಳ ನೆನಪಿಗಾಗಿ ಈ ಕಲ್ಲನ್ನು ಹಾಕಲಾಗಿದೆ. ಪಕ್ಕದಲ್ಲೇ ಮಗುವಿನ ಚಿತ್ರದ ಕೆತ್ತನೆ ಇತ್ತು ಅದೀಗ ಗೋಚರಿಸುತಿಲ್ಲ. ಇಲ್ಲಿನ ಕಲ್ಲನ್ನು ಆರಾಧಿಸಬೇಕು. ಮುಂದೆ ಜೀರ್ಣೋದ್ಧಾರಗೊಳಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ಆರಾಧಿಸುವ ಚಿಂತನೆ ಮಾಡಬೇಕು ಎನ್ನುವ ಸಲಹೆಯನ್ನು ಜೋತಿಷಿಯೊಬ್ಬರು ಈ ಹಿಂದೆ ನೀಡಿದ್ದರು ಎನ್ನುತ್ತಾರೆ ಸ್ಥಳೀಯರು.


ಇಲ್ಲೇ ಪಕ್ಕದಲ್ಲಿ ಶಿರಕಲ್ಲು ಎಂಬ ಜಾಗವೂ ಇದೆ. ಈ ಪರಿಸರದಲ್ಲಿ ದೈವಗಳ ಮೂಲ ಸ್ಥಾನವೂ ಇದ್ದ ಬಗ್ಗೆ ಹಿರಿಯರೂ ಹೇಳುತ್ತಾರೆ. ಅಂಡಾರು ಕೊಡಮಣಿತ್ತಾಯಿ ದೈವದ ಮೂಲ ಆರಾಧನೆ ಇಲ್ಲಿ ನಡೆಯುತ್ತಿತ್ತು ಎನ್ನುವುದು ಹಿರಿಯರಿಂದ ಕೇಳಿ ಬರುವ ಸಂಗತಿಗಳಾಗಿವೆ.

Related Articles

Latest Articles