Friday, June 27, 2025

ಹೇಳಿದ ಕಡೆ ಕತ್ತರಿ ಹಾಕಿದರಷ್ಟೇ ಸೆನ್ಸಾರ್ ಪ್ರಮಾಣ ಪತ್ರ ನೀಡುತ್ತೇವೆ – ‘ಎಮರ್ಜೆನ್ಸಿ’ ಸಿನಿಮಾಗೆ ಇದೆಂತಾ ಸಂಕಷ್ಟ?

ನಟಿ, ಸಂಸದೆ, ಕಂಗನಾ ರಣಾವತ್​ ಅವರು ಭಾರಿ ನಿರೀಕ್ಷೆ ಇಟ್ಟುಕೊಂಡು ‘ಎಮರ್ಜೆನ್ಸಿ’ ಸಿನಿಮಾ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲಿ ನಟಿಸಿ, ನಿರ್ದೇಶನವನ್ನೂ ಮಾಡಿದ್ದಾರೆ. ಈ ಸಿನಿಮಾದ ನಿರ್ಮಾಣದಲ್ಲೂ ಕಂಗನಾ ಅವರು ಪಾಲುದಾರಿಕೆ ಹೊಂದಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆ ಆಗಿರಬೇಕಿತ್ತು. ಆದರೆ ಚಿತ್ರಕ್ಕೆ ಸೆನ್ಸಾರ್​ ಪ್ರಮಾಣ ಪತ್ರ ಸಿಗುವುದು ತಡವಾಗಿದೆ. ಹಾಗಾಗಿ ರಿಲೀಸ್​ ದಿನಾಂಕ ಮುಂದೂಡಿಕೆಯಾಗಿದೆ.

ಸಿನಿಮಾದ ಬಿಡುಗಡೆ ವಿಳಂಬ ಆಗಿದ್ದರಿಂದ ನಿರ್ಮಾಪಕರು ಕೋರ್ಟ್​ ಮೆಟ್ಟಿಲು ಏರಿದ್ದಾರೆ. ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕುತ್ತಿರುವ ಸೆನ್ಸಾರ್​ ಮಂಡಳಿಗೆ ಕೋರ್ಟ್​ ಚಾಟಿ ಬೀಸಿದೆ. ಆದಷ್ಟು ಬೇಗ ಒಂದು ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಸಿನಿಮಾವನ್ನು ಈಗಾಗಲೇ ಮೇಲ್ಮನವಿ ಸಮಿತಿ ಕೂಡ ವೀಕ್ಷಿಸಿದೆ. ಆ ಬಗ್ಗೆ ಬಾಂಬೆ ಹೈಕೋರ್ಟ್​ಗೆ ಸೆನ್ಸಾರ್​ ಮಂಡಳಿ ಮಾಹಿತಿ ನೀಡಿದೆ.

‘ಮೇಲ್ಮನವಿ ಕಮಿಟಿಯು ಸೂಚಿಸಿರುವ ದೃಶ್ಯಗಳಿಗೆ ಚಿತ್ರತಂಡದವರು ಕತ್ತರಿ ಹಾಕಿದರೆ ಪ್ರಮಾಣ ಪತ್ರ ನೀಡಲಾಗುತ್ತದೆ’ ಎಂದು ಸೆನ್ಸಾರ್ ಮಂಡಳಿ ತಿಳಿಸಿದೆ. ಈಗ ಚಿತ್ರತಂಡದವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಇದೆ. ಇಂದಿರಾ ಗಾಂಧಿ ದೇಶಾದ್ಯಂತ ಹೇರಿದ್ದ ತುರ್ತು ಪರಿಸ್ಥಿತಿಯ ದಿನಗಳನ್ನು ಆಧರಿಸಿ ‘ಎಮರ್ಜೆನ್ಸಿ’ ಸಿನಿಮಾ ಮೂಡಿಬಂದಿದೆ.

ನೈಜ ಘಟನೆಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಇತಿಹಾಸದ ಮಾಹಿತಿಯನ್ನು ತಿರುಚಲಾಗಿದೆಯೇ ಎಂಬ ಅನುಮಾನ ಕೂಡ ಕೆಲವರಿಗೆ ಇದೆ. ಸಿಖ್ ಸಮುದಾಯವನ್ನು ಕೆಟ್ಟ ರೀತಿಯಲ್ಲಿ ತೋರಿಸಬಾರದು ಎಂದು ಕೂಡ ಕೆಲವರು ನ್ಯಾಯಾಲಯಕ್ಕೆ ತಕರಾರು ಸಲ್ಲಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಬಿಡುಗಡೆ ಬಳಿಕ ಚಿತ್ರವು ವಿವಾದಕ್ಕೆ ಕಾರಣ ಆಗಬಾರದು ಎಂಬ ಉದ್ದೇಶದಿಂದ ಸೆನ್ಸಾರ್​ ಮಂಡಳಿ ಸಾಕಷ್ಟು ಎಚ್ಚರಿಕೆ ವಹಿಸುತ್ತಿದೆ.

Related Articles

Latest Articles